ಮೂಡುಬಿದಿರೆ: ಮಹಾವೀರ ಕಾಲೇಜಿನಲ್ಲಿ ಫುಟ್ಬಾಲ್ ಪಂದ್ಯಾಟ
ಮೂಡುಬಿದಿರೆ, ಸೆ,20: ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್, ಮಣಿಪಾಲದ ಅಮೃತ ಮಹೋತ್ಸವದ ಪ್ರಯುಕ್ತ, ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರ್ ಶಾಲಾ/ಕಾಲೇಜು ಫುಟ್ಬಾಲ್ ಪಂದ್ಯಾಟದ ಪದವಿ ವಿಭಾಗದಲ್ಲಿ ಎಸ್.ಎನ್.ಎಂ. ಪಾಲಿಟೆಕ್ನಿಕ್ ಕಾಲೇಜು ಪ್ರಥಮ ಸ್ಥಾನವನ್ನು ಹಾಗೂ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಪದವಿಪೂರ್ವ ವಿಭಾಗದಲ್ಲಿ ಕಾರ್ಕಳದ ಭುವನೇಂದ್ರ ಪ.ಪೂ. ಕಾಲೇಜು ಪ್ರಥಮ ಸ್ಥಾನ ಮತ್ತು ಶ್ರೀ ಮಹಾವೀರ ಪ.ಪೂ.ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಮಣಿಪಾಲ ಅಕಾಡೆಮಿ ಅಧೀನಕ್ಕೊಳಪಟ್ಟ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಈ ಪಂದ್ಯಾಟದಲ್ಲಿ ಒಟ್ಟು 14 ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡಿದ್ದವು.
ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಪಂದ್ಯಾಟವನ್ನು ಉದ್ಘಾಟಿಸಿದರು. ಎಸ್.ಎನ್.ಎಂ.ಪಾಲಿಟೆಕ್ನಿಕ್ ಪ್ರಾಂಶುಪಾಲ ಜೆ.ಜೆ.ಪಿಂಟೊ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜ್ಪ್ರಸಾದ್ ವಂದಿಸಿದರು. ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಗೌತಮಿ ಪೈ ಕಾರ್ಯಕ್ರಮ ನಿರೂಪಿಸಿದರು.