ಮಾನವೀಯ ಮೌಲ್ಯಕ್ಕೆ ಎಸಗಿದ ಅಪಚಾರ: ಅಬ್ಬಾಸ್ ಅಲಿ
ಗೂಡಿನಬಳಿ ಬಾಲಕಿಯ ಅತ್ಯಾಚಾರ ಪ್ರಕರಣ
ಬಂಟ್ವಾಳ, ಸೆ. 22: ಗೂಡಿನಬಳಿಯಲ್ಲಿ ಇತ್ತೀಚೆಗೆ ನಡೆದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವು ಮಾನವೀಯ ಮೌಲ್ಯಕ್ಕೆ ಎಸಗಿದ ಅಪಚಾರ. ಇಂತಹ ಅಮಾನವೀಯ ಹಾಗೂ ಪೈಶಾಚಿಕ ಕೃತ್ಯ ಅತ್ಯಂತ ಹೇಯ ಹಾಗೂ ಖಂಡನೀಯ ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅವರು, ನಾಲ್ಕನೆ ತರಗತಿ ಕಲಿಯುತ್ತಿರುವ ಪುಟ್ಟ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಕಿರಾತಕರು ಯಾವುದೇ ಜಾತಿ, ಧರ್ಮಕ್ಕೆ ಸೇರಿದವರಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದಿದ್ದಾರೆ.
ಆರೋಪಿಗಳನ್ನು ಬಂಧಿಸಿರುವ ಬಂಟ್ವಾಳ ಪೊಲೀಸರ ಕ್ರಮವನ್ನು ಶ್ಲಾಘಿಸಿರುವ ಅಬ್ಬಾಸ್ ಅಲಿ, ಇಂತಹ ಅಮಾನವೀಯ ಘಟನೆಗಳು ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ನಡೆಯಬಾರದು. ಈ ಒಂದು ಘಟನೆ ಸಮಾಜಕ್ಕೆ ಒಂದು ಪಾಠವಾಗುವ ರೀತಿಯಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Next Story