ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ವಿರುದ್ಧ ಪ್ರತಿಭಟನೆ
ಮಂಗಳೂರು, ಅ.12: ದ.ಕ.ಜಿಲ್ಲೆಯಲ್ಲಿ ಮರಳು, ಡ್ರಗ್ಸ್ ಮಾಫಿಯಾ ಜತೆಗೆ ಗೋ ಮಾಫಿಯಾ ಕೂಡಾ ಕಾರ್ಯಾಚರಿಸುತ್ತಿದೆ. ಗೋ ಮಾಫಿಯಾ ಜತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ರ ಕೈವಾಡವಿದೆ. ಹಾಗಾಗಿಯೇ ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ 15 ಕೋ.ರೂ.ವನ್ನು ಸಚಿವರು ಕಸಾಯಿಖಾನೆಗೆ ನೀಡಲು ಮುಂದಾಗಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆರೋಪಿಸಿದರು.
ಕುದ್ರೋಳಿಯ ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಯೋಜನೆಯ 15 ಕೋ.ರೂ. ಮಂಜೂರು ಮಾಡಲು ಹೊರಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಮನಪಾ ಕಚೇರಿ ಮುಂಭಾಗ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭ ಬಿಜೆಪಿ ಗೋ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ವಿನಯ ಎಲ್. ಶೆಟ್ಟಿ, ದುರ್ಗಾವಾಹಿನಿ ಸಂಚಾಲಕಿ ವಿದ್ಯಾ ಮಲ್ಯ ಮಾತನಾಡಿದರು. ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪ್ವೆಲ್, ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್, ಪುಮುಖರಾದ ಭುಜಂಗ ಕುಲಾಲ್, ಪ್ರದೀಪ್ ಅತ್ತಾವರ, ನವೀನ್ ಮೂಡುಶೆಡ್ಡೆ, ಶರಣ್ ಪಂಪ್ವೆಲ್ ಹಾಗು ಇತರರು ಭಾಗವಹಿಸಿದ್ದರು.