ಶಿರೂರು ಮಠದ ಉತ್ತರಾಧಿಕಾರಿಗಾಗಿ ಯೋಗ್ಯರ ಹುಡುಕಾಟ: ಪೇಜಾವರ ಶ್ರೀ
ಉಡುಪಿ, ಅ.14: ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ವಿಚಾರ ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಬಿಟ್ಟದ್ದು. ಅದನ್ನು ಸೋದೆ ಸ್ವಾಮೀಜಿ ಸರಿಯಾಗಿ ನಿಬಾಯಿಸಲಿದ್ದಾರೆ. ಅವರಿಗೆ ನಮ್ಮ ಬೆಂಬಲ ಇದೆ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಕೃಷ್ಣ ಮಠದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು. ಶಿರೂರು ಮಠದ ಉತ್ತರಾಧಿಕಾರಕ್ಕೆ ಯೋಗ್ಯರಾದವರನ್ನು ಹುಡುಕಲಾಗುತ್ತಿದೆ. ಅದಕ್ಕೆ ವಯಸ್ಕರು, ಪ್ರೌಢರು ಆಗ ಬೇಕು. ತಂದೆ ತಾಯಿ ಮತ್ತು ಅವರು ಒಪ್ಪಬೇಕು. ಅದನ್ನೆಲ್ಲವನ್ನು ದ್ವಂದ್ವ ಮಾಧೀಶರು ನಿಬಾಯಿಸುತ್ತಾರೆ ಎಂದರು.
ಶಿರೂರು ಮಠದ ಎಲ್ಲ ಸೊತ್ತುಗಳು ಮುಂದಿನ ಪೀಠಾಧಿಪತಿಗಳಿಗೆ ಸಿಗ ಬೇಕೆಂಬ ಉದ್ದೇಶದಿಂದ ದ್ವಂದ್ವ ಮಠದ ಸೋದೆ ಸ್ವಾಮೀಜಿ ಹೊಣೆಗಾರಿಕೆ ವಹಿಸಿಕೊಂಡು ಅವುಗಳನ್ನು ಪ್ರಾಮಾಣಿಕವಾಗಿ ರಕ್ಷಣೆ ಮಾಡುತ್ತಿದ್ದಾರೆ. ಆ ಸೊತ್ತುಗಳು ಯಾರ ಪಾಲಾಗದಂತೆಯೂ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಾವು ಮಾತನಾ ಡುವುದಿಲ್ಲ. ಮಹಿಳೆಯರು ಹೋದರೂ ನಮ್ಮ ಆಕ್ಷೇಪ ಇಲ್ಲ. ಮಹಿಳೆಯರು ಕೃಷ್ಣ ದೇವರ ದರ್ಶನಕ್ಕೂ ಬರುತ್ತಾರೆ. ಶಿವ ದೇವಸ್ಥಾನ ಹಾಗೂ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಹೋಗುತ್ತಾರೆ. ಶಬರಿಮಲೆ ದೇವಸ್ಥಾನದ ಸಂಪ್ರಾದಾಯ ವಿಚಾರಕ್ಕೆ ನಾವು ಕೈ ಹಾಕುವುದಿಲ್ಲ. ಅದಕ್ಕೆ ಅದರ ಭಕ್ತರು, ಅರ್ಚಕರು, ಕೋರ್ಟ್ ಹಾಗೂ ರಾಜ ವಂಶ ಇದೆ ಎಂದರು.