‘ಕೆಸಿಸಿ ಆರೋಗ್ಯ ಕಾರ್ಡ್ ಬಗ್ಗೆ ಸಂಶಯ ಬೇಡ’
ಮಂಗಳೂರು, ಅ.17: ಕೆಸಿಸಿ ಚಾರಿಟೇಬಲ್ ಟ್ರಸ್ಟ್ ಕಳೆದ ಮೂರು ನಾಲ್ಕು ವರ್ಷಗಳಿಂದ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕೇರಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆರೋಗ್ಯ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಬಡವರಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭಿಸುತ್ತಿದ್ದು, ಕೆಸಿಸಿ ಆರೋಗ್ಯ ಕಾರ್ಡ್ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಕೆಸಿಸಿ ಚಾರಿಟೇಬಲ್ ಟ್ರಸ್ಟ್ನ ಸಿಇಒ ಅಬ್ದುಲ್ ರಹಿಮಾನ್ ಕೆ.ಎ. ತಿಳಿಸಿದ್ದಾರೆ.
ಕೆಸಿಸಿ ವತಿಯಿಂದಲೇ ಆಸ್ಪತ್ರೆ ಮತ್ತು ಹಲವು ಆರೋಗ್ಯ ಕೇಂದ್ರಗಳು ನಡೆಸಲ್ಪಡುತ್ತಿದ್ದು, ಇತರ ಹಲವು ಪ್ರತಿಷ್ಠಿತ ಆಸ್ಪತ್ರೆಗಳ ಸಹಯೋಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೆಸಿಸಿ ಆರೋಗ್ಯ ಕಾರ್ಡ್ನ್ನು ಆರಂಭಿಸಿ, ಸಾವಿರಾರು ಬಡರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಟ್ರಸ್ಟ್ನ ಬಗ್ಗೆ ಅಪಾರ ಜನ ಬೆಂಬಲ ದೊರಕುತ್ತಿದೆ. ಸಂಸ್ಥೆಯ ಬಗ್ಗೆ ಕೆಲವು ವ್ಯಕ್ತಿಗಳು ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ನೀಡುತ್ತಿ ದ್ದಾರೆ ಎಂದು ಸಾರ್ವಜನಿಕರ ಗಮನಕ್ಕೆ ಈ ಮೂಲಕ ತಿಳಿಯಪಡಿಸುತ್ತೇವೆ ಎಂದರು.
ಈ ಬಗ್ಗೆ ಲಿಸ್ಟ್ನಲ್ಲಿ ನೀಡಿದ ಎಲ್ಲ ಆಸ್ಪತ್ರೆಗಳೊಂದಿಗಿನ ಕರಾರುಪತ್ರವು ಟ್ರಸ್ಟ್ ಅಧಿಕಾರಿಗಳ ಕೈಯಲ್ಲಿದೆ. ಯಾವುದೇ ಇಲಾಖೆಗೂ ಸೂಕ್ತ ಸಮಯದಲ್ಲಿ ಅದರ ಪ್ರತಿಯನ್ನು ನೀಡಲು ಟ್ರಸ್ಟ್ ಸಿದ್ಧವಿದೆ. ಯಾವುದೇ ಮಾಹಿತಿ ಪಡೆಯದೆ ಹೇಳಿಕೆ ನೀಡಿರುವವರ ವಿರುದ್ಧ ಪ್ರಕರಣ ದಾಖಲಿಸಲು ಕೆಸಿಸಿ ಟ್ರಸ್ಟ್ ಮುಂದಾಗಿದೆ. ಇದು ಸಂಸ್ಥೆಯ ಘನತೆಯನ್ನು ಕುಗ್ಗಿಸಲು ಮಾಡಿರುವ ವ್ಯವಸ್ಥಿತ ಸಂಚು ಎಂದು ಕೆಸಿಸಿ ಚಾರಿಟೇಬಲ್ ಟ್ರಸ್ಟ್ನ ಸಿಇಒ ಅಬ್ದುಲ್ ರಹಿಮಾನ್ ಕೆ.ಎ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.