ಚರ್ಚೆಗಳಿಗೆ ಹೆದರುವ ಚಕ್ರವರ್ತಿ ಸೂಲಿಬೆಲೆ ‘ಹೇಡಿ’: ದಿನೇಶ್ ಅಮೀನ್ ಮಟ್ಟು
ಭಟ್ಕಳ, ಅ.18: ಚಕ್ರವರ್ತಿ ಸೂಲಿಬೆಲೆಯನ್ನು ಈ ಹಿಂದೆ ವಿವೇಕಾನಂದರ ಬಗ್ಗೆ ಚರ್ಚೆಗೆ ನಾನು ಆಹ್ವಾನಿಸಿದ್ದೆ. ಆದರೆ ಆತ ಬಂದಿಲ್ಲ. ಚರ್ಚೆಗಳಿಗೆ ಹೆದರುವ ಸೂಲಿಬೆಲೆ ಓರ್ವ ಹೇಡಿ ಎಂದು ಚಿಂತಕ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.
ಬುಧವಾರ ಸಂಜೆ ಭಟ್ಕಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
“ಪ್ರತಿ ಸಮುದಾಯವೂ ಟೀಕೆ, ಟಿಪ್ಪಣಿಗಳಿಗೆ ತೆರೆದುಕೊಳ್ಳಬೇಕು. ಟೀಕೆ, ವಿಮರ್ಶೆಗಳನ್ನು ಸ್ವೀಕರಿಸದ ಯಾವ ಸಮುದಾಯವೂ ಬೆಳೆಯುವುದಿಲ್ಲ. ಜಾತ್ಯಾತೀತವಾದಿಗಳು ಮುಸ್ಲಿಮರ ಸಭೆಗಳಲ್ಲಿ ಹಿಂದೂಗಳನ್ನು ಟೀಕಿಸುತ್ತಾರೆ. ಆದರೆ ನಾನು ಮುಸ್ಲಿಮರ ಸಭೆಯಲ್ಲಿ ಮುಸ್ಲಿಮರಿಗೇ ಬಯ್ಯುತ್ತೇನೆ. ನನಗೆ ಅವಕಾಶ ಸಿಕ್ಕರೆ ಬ್ರಾಹ್ಮಣರ ಸಭೆಯಲ್ಲೇ ಅನಂತ್ ಕುಮಾರ್ ಹೆಗಡೆಯೂ ಬಯ್ಯಬಲ್ಲೆ. ಆರೆಸ್ಸೆಸ್ ಸಭೆಗೆ ಹೋಗಿ ಆರೆಸ್ಸೆಸ್ ಗೇ ಬಯ್ಯುತ್ತೇನೆ” ಎಂದವರು ಹೇಳಿದರು.
“ನಾನು ವಿವೇಕಾನಂದರ ಬಗ್ಗೆ ಬರೆದಾಗ ಚಕ್ರವರ್ತಿ ಸೂಲಿಬೆಲೆ ನನಗೆ ಜೀವಬೆದರಿಕೆ ಒಡ್ಡಿದ್ದರು. ಆದರೆ ಈ ಬಗ್ಗೆ ನಾನು ಆತನಿಗೆ ಸವಾಲು ಹಾಕಿದ್ದೆ. ಒಂದೇ ವೇದಿಕೆಯಲ್ಲಿ ನಿಂತು ನಾನು ವಿವೇಕಾನಂದರ ಬಗ್ಗೆ ಮಾತನಾಡುತ್ತೇನೆ. ನೀನೂ ಮಾತನಾಡು ಎಂದು ಸವಾಲು ಹಾಕಿದ್ದೆ. ಆದರೆ ಆತ ಬಂದಿಲ್ಲ. ಆತ ಒಬ್ಬ ಹೇಡಿ. ಆದರೆ ಮುಸ್ಲಿಮರ ಸಮಾವೇಶದಲ್ಲಿ ನಾನು ಸೂಲಿಬೆಲೆಗೆ ಬಯ್ಯುವುದಿಲ್ಲ. ಬದಲಾಗಿ ಮುಸ್ಲಿಮರನ್ನೇ ಟೀಕಿಸುತ್ತೇನೆ" ಎಂದು ಅಮೀನ್ ಮಟ್ಟು ಹೇಳಿದರು.