ಅಪ್ರಾಪ್ತೆಗೆ ಕಿರುಕುಳ: ಗ್ರಾಮಲೆಕ್ಕಿಗನಿಗೆ ನ್ಯಾಯಾಂಗ ಬಂಧನ
ಪಡುಬಿದ್ರಿ, ಅ. 24: ಅಪ್ರಾಪ್ತೆ ಯುವತಿಗೆ ಕಿರುಕುಳ ನೀಡಿರುವ ಆರೋಪದಡಿ ಬಂಧಿಸಲಾಗಿರುವ ಹೆಜಮಾಡಿ ಗ್ರಾಮ ಪಂಚಾಯತ್ ಗ್ರಾಮಕರಿಣಿಕ ಹಾಗೂ ಸಹಾಯಕಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಹೆಜಮಾಡಿ ಗ್ರಾಮ ಪಂ. ಗ್ರಾಮಕರಣಿಕ ಕುಮಾರಸ್ವಾಮಿ ಹಾಗೂ ಮಧ್ಯವರ್ತಿ ಕಿಶೋರಿಯನ್ನು ಪಡುಬಿದ್ರಿ ಪೊಲೀಸರು ಬುಧವಾರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹೆಜಮಾಡಿಯ ಗ್ರಾಮಲೆಕ್ಕಿಗನಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಕುಮಾರಸ್ವಾಮಿ ಜಾಗದ ವಿಚಾರಕ್ಕೆ ಸಂಬಂಧಿಸಿ ಯುವತಿಯ ಮೊಬೈಲ್ ನಂಬ್ರ ಪಡೆದು ಕೊಂಡು ಹೊಟೇಲ್ ಒಂದಕ್ಕೆ ಕರೆಸಿ ಅಸಭ್ಯವಾಗಿ ವರ್ತಿಸಿದ್ದ. ಆ ಬಳಿಕ ಗ್ರಾಮಸ್ಥರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಮತ್ತೆ ಮೊಬೈಲ್ಗೆ ಸಂದೇಶ ರವಾನಿಸುತಿದ್ದ ಎಂದು ದೂರಲಾಗಿದೆ. ಕುಮಾರ ಸ್ವಾಮಿಯ ಈ ಕೃತ್ಯಕ್ಕೆ ಸಹಾಯಕಿ ಕಿಶೋರಿ ಮಧ್ಯವರ್ತಿಯಾಗಿದ್ದಳು. ಈಕೆಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ನಿರಂತರ ಕಿರುಕುಳ ನೀಡುತ್ತಿರುವುದರಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು. ಗ್ರಾಮಕರಣಿಕ ವಿರುದ್ಧ ಪೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.