ದೇರಳಕಟ್ಟೆ: ಯೆನೆಪೊಯ ವಿವಿಯಲ್ಲಿ ಪೌಷ್ಠಿಕಾಂಶ ಅಧ್ಯಯನ ಕೇಂದ್ರ ಉದ್ಘಾಟನೆ
ಉಳ್ಳಾಲ, ಅ. 25: ಅಪೌಷ್ಠಿಕತೆ ಸಾಮಾಜಿಕ ಸ್ವಾಸ್ಥ್ಯದ ಮೇಲೆ ದೊಡ್ಡ ಮಟ್ಟಿಗೆ ಅಡ್ಡ ಪರಿಣಾಮ ಬೀರುವುದರಿಂದ ಮಾನಸಿಕ ಹಾಗೂ ದೈಹಿಕ ನ್ಯೂನ್ಯತೆಗಳು ಕಾಡುತ್ತದೆ. ಅಪೌಷ್ಠಿಕತೆಯಿಂದಾಗಿ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತಿದೆ. ಹಾಗಾಗಿ ಸಂಶೋಧನೆಗಳು ಪೌಷ್ಠಿಕತೆಗೆ ಪೂರಕವಾಗಿ ನಡೆಯಬೇಕಿದೆ ಎಂದು ಇಂಡಿಯನ್ ಮೆಡಿಕಲ್ ರಿಸರ್ಚ್ ಕೌನ್ಸಿಲ್ನ ನಿವೃತ್ತ ಮಹಾ ನಿರ್ದೇಶಕ ಪ್ರೊ. ವಿಶ್ವ ಮೋಹನ್ ಕಟೋಚ್ ಹೇಳಿದರು.
ದೇರಳಕಟ್ಟೆಯ ಯೆನೆಪೊಯ ಪರಿಗಣಿಸಲಾಗಿರುವ ವಿವಿಯ ಕ್ಯಾಂಪಸ್ನ ಇಎಂಡಿ ಆಡಿಟೋರಿಂಯನಲ್ಲಿಗುರುವಾರ ನಡೆದ ಯೆನೆಪೊಯ ನ್ಯೂಟ್ರಿಶಿಯನ್ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೆನೆಪೊಯ ವಿಶ್ವವಿದ್ಯಾಲಯದಲ್ಲಿಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಚಿಂತನೆಗಳ ಮೂಲಕ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಲವು ದಶಕಗಳಿಂದ ನಡೆದುಕೊಂಡು ಬಂದಿರುವಂತೆ ಪಾಶ್ಚಿಮಾತ್ಯ ದೇಶಗಳ ಬರಹಗಾರರು ಬರೆದಿರುವ ಪಠ್ಯಕ್ರಮಗಳ ಆಧಾರದಲ್ಲಿ ಪೊಷಕಾಂಶ ಕೊಡುವುದರ ಬದಲಿಗೆ ಆಯಾ ಪ್ರದೇಶ ಹಾಗೂ ಪರಿಸರಕ್ಕನುಗುಣವಾಗಿ ಸ್ಥಳೀಯರು, ಅನುಭವಿಗಳು ಹಾಗೂ ಹಿರಿಯರ ಮಾರ್ಗದರ್ಶನ ಪಡೆದು ನೂತನ ಪಠ್ಯಪುಸ್ತಕ ರಚಿಸುವ ಮೂಲಕ ಯೇನೆಪೆÇಯ ವಿವಿ ದೇಶದ ಇತರ ವಿವಿಗಳಿಗೆ ಮಾದರಿಯಾಗಲಿ. ಹಾಗೆಯೇ ಯಾವುದೇ ನೂತನ ಸಂಶೋಧನೆ ವರದಿಗೆ ಸರಕಾರದ ನೀತಿ ಜಾರಿಗೊಳಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ದೇರಳಕಟ್ಟೆಯ ಯೆನೆಪೊಯ ಪರಿಗಣಿಸಲಾಗಿರುವ ವಿವಿಯ ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ ಮಾತನಾಡಿ ನೂತನ ಕೇಂದ್ರವನ್ನು ಜನಸಾಮಾನ್ಯರಿಗೆ ಉಪಯೋಗವಾಗುವಂತೆ ರಚಿಸಲಾಗಿದೆ. ಭಾರತ ಸರಕಾರ ಆರೋಗ್ಯದ ಕುರಿತಾಗಿ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಕ್ಷಯರೋಗಿಗಳಿಗೂ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್ ಹೊರತಂದಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಯೆನೆಪೊಯ ವಿವಿ ಕ್ರಾಂತಿಕಾರಿ ಬೆಳವಣಿಗೆ ಕಂಡಿದೆ ಎಂದರು.
ಕುಲಪತಿ ಡಾ. ವಿಜಯ ಕುಮಾರ್ ಹಾಗೂ ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಕೆ.ಎಸ್ ಉಪಸ್ಥಿತರಿದ್ದರು.
ಯೆನೆಪೊಯ ಪರಿಗಣಿಸಲಾಗಿರುವ ವಿವಿಯ ನ್ಯೂಟ್ರಿಶಿಯನ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಅನುರಾಗ್ ಭಾರ್ಗವ ಸ್ವಾಗತಿಸಿದರು. ಡಾ. ಸುಧಾಕರ ಪ್ರಸಾದ್ ವಂದಿಸಿದರು.