ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣ: ಯು.ಸಿ.ಶೇಕಬ್ಬ
ಪಡುಬಿದ್ರೆ, ಅ. 28: ಉತ್ತಮ ಆರೋಗ್ಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಾಲೂಕು ಪಂಚಾಯತ್ ಸದಸ್ಯ ಯು.ಸಿ. ಶೇಕಬ್ಬ ಹೇಳಿದರು.
ಅವರು ರವಿವಾರ ಉಚ್ಚಿಲ ಬ್ಲೂವೇವ್ಸ್ನಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಉಚ್ಚಿಲ ಹಾಗೂ ಕಸ್ತೂರ್ ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ 3ನೇ ವರ್ಷದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮದ ಜನರ ಆರೋಗ್ಯದ ಬಗ್ಗೆ ಕಾಳಜಿ ಇರಿಸಿದ ಹೆಲ್ಪಿಂಗ್ ಹ್ಯಾಂಡ್ಸ್ ಉಚ್ಚಿಲ ಯುವಕರ ತಂಡವು ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸುವ ಮೂಲಕ ಜನರಲ್ಲಿ ಆರೋಗ್ಯದ ಬಗೆಗಿನ ಅರಿವನ್ನು ಮೂಡಿಸುತ್ತಿದೆ. ಆ ನಿಟ್ಟಿನಲ್ಲಿ ತಜ್ಞ ವೈದ್ಯರನ್ನು ನಮ್ಮ ಗ್ರಾಮಕ್ಕೆ ಕರೆಸಿ ಉಚಿತವಾಗಿ ಚಿಕಿತ್ಸೆ ಕೊಡಿಸುವ ಮೂಲಕ ಜನರಲ್ಲೂ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿದಂತಾಗುತ್ತದೆ ಎಂದರು.
ಉಚ್ಚಿಲ ಬಡಾಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನಾ ಎ.ಕರ್ಕೇರ, ಎಸ್.ಡಿ.ಪಿ.ಐ ಕಾಪು ಪುರಸಭಾ ವ್ಯಾಪ್ತಿಯ ಅಧ್ಯಕ್ಷರಾದ ಹನೀಫ್, ಹೆಲ್ಪಿಂಗ್ ಹ್ಯಾಂಡ್ಸ್ ಉಚ್ಚಿಲ ಇದರ ಅಧ್ಯಕ್ಷರಾದ ಇರ್ಫಾನ್, ಸ್ಥಾಪಕಾಧ್ಯಕ್ಷರಾದ ಜಿಯಾವುಲ್ ರಹ್ಮಾನ್, ಸೈಯ್ಯದ್ ಆಬ್ದುಲ್ ಲತೀಫ್, ಮಣಿಪಾಲ ಕಸ್ತೂರ್ ಬಾ ಆಸ್ಪತ್ರೆಯ ವೈದ್ಯರುಗಳಾದ ಡಾ. ಕೌಶಿಕ್, ಡಾ.ನವನೀತ್, ಡಾ.ಮನಾಲಿ ಹಜಾರಿಕಾ ವೇದಿಕೆಯಲ್ಲಿದ್ದರು.
ಜುನೈದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಉಚಿತ ಆರೋಗ್ಯ ಶಿಬಿರದಲ್ಲಿ ಚರ್ಮ ರೋಗ ವಿಭಗದಲ್ಲಿ 100, ಇಎನ್ಟಿ ವಿಭಾಗದಲ್ಲಿ 37, ಸಾಮಾನ್ಯ ತಪಾಸಣೆಯಡಿ 155, ಕಣ್ಣು ತಪಾಸಣಾ ವಿಭಾಗದಲ್ಲಿ 112 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.