ಮೂಲ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಬ್ಯಾಂಕ್ಗಳ ವಿಲೀನ ಆಗಲಿ: ಟಿ.ಅಶೋಕ್ ಪೈ
ಮಣಿಪಾಲ, ಅ.31: ಬ್ಯಾಂಕ್ಗಳ ವಿಲೀನದ ಹೆಸರಿನಲ್ಲಿ ಸಿಂಡಿಕೇಟ್ ಬ್ಯಾಂಕ್ನ ಮೂಲ ಸ್ವರೂಪ/ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಕೇಂದ್ರ ಸರಕಾರ ನೋಡಿ ಕೊಳ್ಳಬೇಕು ಎಂದು ಉದ್ಯಮಿ ಟಿ.ಅಶೋಕ್ ಪೈ ಹೇಳಿದ್ದಾರೆ.
ಮಣಿಪಾಲ ಸಿಂಡಿಕೇಟ್ ಬ್ಯಾಂಕಿನ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಸಿಂಡಿಕೇಟ್ ಬ್ಯಾಂಕ್ನ 93ನೇ ಸಂಸ್ಥಾಪನಾ ದಿನ ಹಾಗೂ ಆಯ್ದ ಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತ ನಾಡುತಿದ್ದರು.
ವಿಲೀನಿಕರಣದ ಹೆಸರಿನಲ್ಲಿ ಸಿಂಡ್ ಬ್ಯಾಂಕ್ ಗುರುತನ್ನು ಹಾಳುಮಾಡ ಬೇಡಿ. ಬ್ಯಾಂಕ್ನ ಅಸ್ತಿತ್ವವನ್ನು ಉಳಿಸಿಕೊಳ್ಳಿ. ಆರಂಭದಲ್ಲಿ ಸಿಂಡಿಕೇಟ್ ಬ್ಯಾಂಕ್ನಲ್ಲಿ ಕೃಷಿ ಸಾಲ, ಶೂನ್ಯ ಶುಲ್ಕದಲ್ಲಿ ವಿದ್ಯಾರ್ಥಿಗಳ ಖಾತೆ, ಫಿಗ್ಮಿ, ಶಿಕ್ಷಣ ಸಾಲ, ಮಹಿಳಾ ಸಿಬ್ಬಂದಿ ನೇಮಕ ಸಹಿತ ನಾನಾ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಇದೀಗ 50 ವರ್ಷದ ಬಳಿಕ ಸರಕಾರವೇ ಈ ಯೋಜನೆಗಳನ್ನು ಬ್ಯಾಂಕ್ಗಳಲ್ಲಿ ಜಾರಿಗೆ ತರುತ್ತಿದೆ ಎಂದರು.
ಕಾರ್ಯಕ್ರಮವನ್ನು ಸಿಂಡಿಕೇಟ್ ಬ್ಯಾಂಕ್ನ ಮಾಜಿ ಅಧ್ಯಕ್ಷ ನವೀನ್ ಚಂದ್ರ ತಿಂಗಳಾಯ ಉದ್ಘಾಟಿಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಚ್.ಭಾಸ್ಕರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಪಿ. ನಾರಾಯಣ ಪೈ, ವಸಂತಿ ಆರ್. ಶೆಣೈ, ಸತೀಶ್ ಯು.ಪೈ, ವನಿತಾ ಪೈ, ಗಾಯಿತ್ರಿ ಪೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರಾದ ಡಾ. ಚಂದ್ರಶೇಖರ್, ವಿಮಲಾ ಚಂದ್ರಶೇಖರ್, ಗೋಕುಲದಾಸ್ ಪೈ, ಶ್ರೀಧರ್ ಹಂದೆ, ಮಂಜುನಾಥ ಮಲ್ಯ, ಪ್ರೊ.ಎಂ.ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಪ್ರಾದೇಶಿಕ ವ್ಯವಸ್ಥಾಪಕ ನಟರಾಜ ಎಸ್.ಇ. ಸ್ವಾಗತಿಸಿದರು. ಎಜಿಎಂ ವಿಶ್ವನಾಥ್ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ನಾ ಮರಿಯಾ ಕಾರ್ಯಕ್ರಮ ನಿರೂಪಿಸಿದರು.