ಬೆಳ್ತಂಗಡಿ ಎಪಿಎಂಸಿ: 2ನೇ ಅವಧಿಗೆ ಅಧ್ಯಕ್ಷರಾಗಿ ಕೇಶವ ಬೆಳಾಲು; ಉಪಾಧ್ಯಕ್ಷರಾಗಿ ಅಬ್ದುಲ್ ಗಫೂರ್ ಅವಿರೋಧ ಆಯ್ಕೆ
ಬೆಳ್ತಂಗಡಿ, ನ. 2: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಕೇಶವ ಪಿ. ಬೆಳಾಲು, ಉಪಾಧ್ಯಕ್ಷರಾಗಿ ಅಬ್ದುಲ್ ಗಫೂರ್ ಪುದುವೆಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಪಿಎಂಸಿಯಲ್ಲಿ 11 ಮಂದಿ ಸದಸ್ಯರು ಕೃಷಿಕರ ಕ್ಷೇತ್ರದಿಂದ, ತಲಾ ಒಬ್ಬರು ವರ್ತಕರ, ಸಹಕಾರಿ ಮಾರುಕಟ್ಟೆ, ಕೃಷಿ ಸಂಸ್ಕರಣಾ ಸಹಕಾರಿ ಕ್ಷೇತ್ರದಿಂದ ಸದಸ್ಯರುಗಳನ್ನು ಹೊಂದಿದೆ. ಅಲ್ಲದೆ ಮೂರು ಮಂದಿ ಸರಕಾರದಿಂದ ನಾಮ ನಿರ್ದೇಶಿತ ಸದಸ್ಯರಿದ್ದಾರೆ. 12 ಮಂದಿ ಕಾಂಗ್ರೆಸ್ಸಿನ ಸದಸ್ಯರು, 5 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಸೇರಿದಂತೆ ಒಟ್ಟು 17 ಮಂದಿ ಸದಸ್ಯರುಗಳನ್ನು ಹೊಂದಿದ ಎಪಿಎಂಸಿಗೆ ಎರಡನೇ ಅವಧಿಗೆ ಕಾಂಗ್ರೆಸ್ಸಿನಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಕೇಶವ ಪಿ. ಮತ್ತು ಅಬ್ದುಲ್ ಗಫೂರ್ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿ ಬೆಂಬಲಿತರು ನಾಮಪತ್ರ ಸಲ್ಲಿಸದಿರುವ ಕಾರಣ ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಸಂದರ್ಭ 17 ಮಂದಿ ಸದಸ್ಯರಲ್ಲಿ 16 ಮಂದಿ ಸದಸ್ಯರು ಉಪಸ್ಥಿತರಿದ್ದರು. ಬಿಜೆಪಿ ಬೆಂಬಲಿತ ಸದಸ್ಯ ಅಶೋಕ ಗೋವಿಯಸ್ ಗೈರಾಗಿದ್ದರು. ತಹಸೀಲ್ದಾರ್ ಮದನ್ ಮೋಹನ್ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು. ತಾಲೂಕು ಕಚೇರಿಯ ಚುನಾವಣಾ ವಿಭಾಗದ ಡಿಟಿ ನಾರಾಯಣ ಗೌಡ, ಎಪಿಎಂಸಿ ಕಾರ್ಯದರ್ಶಿ ಸಹಕರಿಸಿದರು.
ಆಯ್ಕೆ ಪ್ರಕ್ರಿಯೆ ಸಂದರ್ಭ ಎಪಿಎಂಸಿ ನಿರ್ಗಮನ ಅಧ್ಯಕ್ಷ ಸತೀಶ ಕಾಶಿಪಟ್ನ, ನಿರ್ಗಮನ ಉಪಾಧ್ಯಕ್ಷ ಗಣೇಶ ಪ್ರಸಾದ್ ಎಂ.ಕೆ., ಸದಸ್ಯರಾದ ಇ. ಸುಂದರ ಗೌಡ, ಪುಷ್ಪರಾಜ ಹೆಗ್ಡೆ, ಜೀವಂಧರ್ ಕುಮಾರ್, ಪಲ್ಲವಿ, ಚಿದಾನಂದ ಪೂಜಾರಿ, ಈಶ್ವರ ಬೈರ, ಆನಂದ ನಾಯ್ಕ್, ಜಯಾನಂದ ಕಲ್ಲಾಪು, ಸೆಲೆಸ್ಟಿನ್ ಡಿಸೋಜಾ, ಜಗದೀಶ ಹೆಗ್ಡೆ, ಅಂಡ್ರೋ ವಿಕ್ಟರ್ ರೆಗೋ, ಚಂಚಲಾ ಕುಂದರ್ ಉಪಸ್ಥಿತರಿದ್ದರು.
ಅಭಿನಂದನೆ
ಮಾಜಿ ಶಾಸಕ ಕೆ. ವಸಂತ ಬಂಗೇರ, ಬ್ಲಾಕ್ ಕಾಂಗ್ರೇಸ್ ನಗರಾಧ್ಯಕ್ಷ ರಾಜಶೇಖರ ಅಜ್ರಿ, ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ಕಿಣಿ, ಜಿ.ಪಂ ಸದಸ್ಯ ಶಾಹುಲ್ ಹಮೀದ್, ಯೂತ್ ಕಾಂಗ್ರೇಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಉಪಾಧ್ಯಕ್ಷ ಸಲೀಂ ಕುವೆಟ್ಟು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ಪ್ರಭಾಕರ್ ಧರ್ಮಸ್ಥಳ, ಗ್ರೇಶಿಯನ್ ವೇಗಸ್, ಅಬ್ದುಲ್ ರಹಿಮಾನ್ ಪಡ್ಪು, ವಸಂತ ಪುದುವೆಟ್ಟು, ಎ.ಜೆ ಅಜಯ್, ಅನಿಲ್ ಪೈ, ಅಶ್ರಫ್ ನೆರಿಯ, ರೋಯ್ ಪುದುವೆಟ್ಟು, ಹರ್ಷಲತಾ, ಜೋಹರಾ, ಯೋಗೀಶ್ ಗೌಡ ಬೆಳಾಲು, ಮೋಹನ್ ಗೌಡ ಬೆಳಾಲು, ಶ್ರೀಧರ ಪೂಜಾರಿ, ನೀಲಮ್ಮ ಪುವೆಟ್ಟು, ಬೊಮ್ಮಣ್ಣ ಗೌಡ, ದೇವಸ್ಯ ಟಿ.ವಿ., ಹರೀಶ ಸುವರ್ಣ, ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ, ಸದಸ್ಯರುಗಳಾದ ಗಣೇಶ್ ಗೌಡ, ಶ್ರೀನಿವಾಸ ಗೌಡ, ಶೈಲೇಶ್ ಠೋಸರ್ ಮೊದಲಾದವರು ಅಭಿನಂದಿಸಿದರು.
ಎರಡನೇ ಅವಧಿಗೆ ನಾಮನಿರ್ದೇಶನ ಸದಸ್ಯರ ಆಯ್ಕೆ
ರಾಜ್ಯ ಸರಕಾರ ಎಪಿಎಂಸಿಯ ಎರಡನೇ ಅವಧಿಗೆ ಮೂರು ಮಂದಿ ನಾಮನಿರ್ದೇಶನ ಸದಸ್ಯರನ್ನು ಆಯ್ಕೆ ಮಾಡಿ ಆದೇಶವನ್ನು ಹೊರಡಿಸಿದೆ. 2018 ಅಕ್ಟೋಬರ್ 25 ರಂದು ಹೊರಡಿಸಿದ ಆದೇಶದಲ್ಲಿ ಮುಂದಿನ ಆದೇಶದ ವರೆಗೆ ಸದಸ್ಯರಾನ್ನಾಗಿ ನಾಮ ನಿರ್ದೇಶನ ಮಾಡಿದೆ. ಕಾಂಗ್ರೆಸ್ಸಿನಿಂದ ಸುಲ್ಕೇರಿಯ ಜಗದೀಶ ಹೆಗ್ಡೆ, ಆರಂಬೋಡಿಯ ಅಂಡ್ರೋ ವಿಕ್ಟರ್ ರೆಗೋ, ಜೆಡಿಎಸ್ನಿಂದ ಚಂಚಲಾ ಕುಂದರ್ ಅವರು ಎಪಿಎಂಸಿಗೆ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.