ಶಿವಮೊಗ್ಗ ಲೋಕಸಭಾ ಉಪ ಚುನಾವಣೆ: ಬೈಂದೂರು ಮತದಾರರಿಂದ ನೀರಸ ಪ್ರತಿಕ್ರಿಯೆ
ಬೈಂದೂರು, ನ.3: ಶಿವಮೊಗ್ಗ ಲೋಕಸಭಾ ಸ್ಥಾನಕ್ಕೆ ಇಂದು ನಡೆಯುತ್ತಿರುವ ಮತದಾನದಲ್ಲಿ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಮತದಾರರಿಂದ ತೀರಾ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬೆಳಗ್ಗೆ ಶಂಕರನಾರಾಯಣ, ಅಮಾಸೆಬೈಲು, ಮಚ್ಚಟ್ಟು ಗ್ರಾಮಗಳ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದಾಗ ಜನರಲ್ಲಿ ಮತ ಹಾಕಲು ನಿರುತ್ಸಾಹ ಕಂಡುಬಂತು.
ನಕ್ಸಲ್ ಬಾಧಿತ ತೊಂಬಟ್ಟು ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಒಟ್ಟು 966 ಮತದಾರರಲ್ಲಿ 10:45ರ ಸುಮಾರಿಗೆ 278 ಮಂದಿ ಮತ ಚಲಾಯಿಸಿದ್ದರು. ಕೆಲ ವರ್ಷಗಳ ಹಿಂದಿನವರೆಗೂ ತೊಂಬಟ್ಟು ನಕ್ಸಲ್ ಚಟುವಟಿಕೆಗಳಿಗೆ ಹೆಸರಾಗಿತ್ತು. ಮತಗಟ್ಟೆಗೆ 4 ಮಂದಿ ಡಿಇಆರ್ ಸಿಬ್ಬಂದಿ ಸೇರಿ ದಂತೆ ಒಟ್ಟು 6 ಮಂದಿಯ ರಕ್ಷಣೆ ಒದಗಿಸಲಾಗಿತ್ತು.
ಅಮಾಸೆಬೈಲಿನ ಮಚ್ಚಟ್ಪು ಸ.ಹಿ.ಪ್ರಾಥಮಿಕ ಶಾಲೆಯ ಮತಗಟ್ಟೆ ಯಲ್ಲೂ ಪೊಲಿಂಗ್ ಅಧಿಕಾರಿಗಳು, ಸಿಬ್ಬಂದಿ ಗಳನ್ನು ಹೊರತುಪಡಿಸಿ ಭದ್ರತೆಗೆ ನೇಮಿಸಿರುವ ಪೊಲೀಸ್ ಹಾಗೂ ಎಂಟು ಮಂದಿ ಕೇಂದ್ರ ಸಶಸ್ತ್ರ ಸೀಮಾ ಬಲ್ ಸಿಬ್ಬಂದಿ ಗಳು ಮಾತ್ರ ಮತಗಟ್ಟೆಯಲ್ಲಿದ್ದರು.
ಈ ಮತಗಟ್ಟೆಯಲ್ಲಿರುವ 1263 ಮತದಾರರಲ್ಲಿ 11:15ಕ್ಕೆ 364 ಮಂದಿ ಮತ ಚಲಾಯಿಸಿದ್ದರು. ಉಳ್ಳೂರು 74 ಗ್ರಾಪಂನ ವಾರಾಹಿ ಕಳಿನಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಯಲ್ಲು ಜನರು ಮತ ಹಾಕಲು ನಿರುತ್ಸಾಹ ತೋರಿಸಿದ್ದಾರೆ.
11 ಗಂಟೆ ಗೆ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ಶೇ.25.10 ಮತದಾನವಾಗಿದೆ. ಕ್ಷೇತ್ರದ ಒಟ್ಟು 2.21 ಲಕ್ಷ ಮತದಾರರಲ್ಲಿ 55,724 ಮಂದಿ ಮತ ಚಲಾಯಿಸಿದ್ದಾರೆ.