ಉಳ್ಳಾಲಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಅಭಿವೃದ್ಧಿ ಕಾರ್ಯ : ಸಚಿವ ಯು.ಟಿ.ಖಾದರ್
ಉಳ್ಳಾಲ, ನ. 3: ಪ್ರವಾಸಿ ಸ್ಥಳವಾಗಿರುವ ಉಳ್ಳಾಲಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲು ಹಾಗೂ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಸಂಪೂರ್ಣ ಕಾಂಕ್ರೀಟಿಕರಣ ನಡೆಸುವ ಉದ್ದೇಶದಿಂದ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು 3.30 ಕೋಟಿ ರೂ. ಅನುದಾನದಡಿ ಉಳ್ಳಾಲ ಸಮುದ್ರ ತೀರದಿಂದ ಅಬ್ಬಕ್ಕ ವೃತ್ತ, ಪ್ಯಾರೀಸ್ ಜಂಕ್ಷನ್, ಸೈಯ್ಯಿದ್ ಮದನಿ ದರ್ಗಾ, ಅಕ್ಕರೆಕೆರೆ, ತೊಕ್ಕೊಟ್ಟು ಸಂತ ಸಎಬೆಸ್ತಿಯನ್ನರ ಚರ್ಚ್ ಹಾಗೂ ತೊಕ್ಕೊಟ್ಟು ಒಳಪೇಟೆ ರಸ್ತೆ ಕಾಂಕ್ರೀಟಿಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು.
ಸದ್ಯಕ್ಕೆ 3.30 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದರೂ, ಮುಂದೆ ಮಾದರಿ ರಸ್ತೆಯನ್ನಾಗಿ ನಿರ್ಮಿಸುವ ಉದ್ದೇಶದಿಂದ ಮತ್ತೆ ರೂ.4 ಕೋಟಿ ಹೆಚ್ಚಿನ ಅನುದಾನ ಮಂಜೂರುಗೊಳಿಸಲಾಗುವುದು. ಇದರಿಂದ ರಸ್ತೆಯಲ್ಲಿ ದೀಪಗಳು, ಸಮಗ್ರ ಚರಂಡಿ ಯೋಜನೆಯನ್ನು ರಚಿಸಲಾಗುವುದು.
ತೊಕ್ಕೊಟ್ಟು ಒಳಪೇಟೆ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು. ಈ ಮೂಲಕ ತೊಕ್ಕೊಟ್ಟು ಒಳಪೇಟೆ ಜಂಕ್ಷನ್ ಅನ್ನು ಮಾದರಿ ಜಂಕ್ಷನ್ ಆಗಿ ರಚಿಸಲಾಗುವುದು ಎಂದರು.
ಈ ಸಂದರ್ಭ ಹಿರಿಯ ಹಾಗೂ ಮೊಗವೀರ ಸಮಾಜದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಐಯೂಬ್ ಮಂಚಿಲ, ಬಾಝಿಲ್ ಡಿಸೋಜ, ಮಹಮ್ಮದ್ ಅಶ್ರಫ್, ರವಿಚಂದ್ರ ಗಟ್ಟಿ, ಇಸ್ಮಾಯಿಲ್ ಅಳೇಕಲ, ಯು.ಎಂ.ಜಬ್ಬಾರ್, ಬಶೀರ್, ಭಾರತಿ, ಸ್ವಪ್ನಾ ಹರೀಶ್, ವೀಣಾ ಡಿಸೋಜ ಉಳಿಯ, ಚಿತ್ರ ಚಂದ್ರಕಾಂತ್, ಝರೀನಾ ರವೂಫ್, ಶಶಿಕಲಾ ಚಎಂಬುಗುಡ್ಡೆ, ಶಹನಾಝ್ ಅಕ್ರಂ ಹಸನ್, ಅಸ್ಗರ್ ಅಲಿ, ರಮೀಝ್ ಕೋಡಿ, ಅಝೀಝ್ ದೋಟ, ಖಮರುನ್ನೀಸಾ ನಿಝಾಂ, ಖೈರುನ್ನೀಸಾ ಆಸೀಫ್ ಕಲ್ಲಾಪು, ರುಖಿಯಾ ಇಕ್ಬಾಲ್, ಅಕ್ಕರಕೆರೆಯ ಮಸೀದಿಯ ಅಧ್ಯಕ್ಷ ಖಾದರ್ ಮುಸ್ಲಿಯಾರ್, ಮಾಜಿ ನಗರಸಭೆ ಸದಸ್ಯ ಮುಸ್ತಾಫ ಅಬ್ದುಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ಹುಸೈನ್ ಕುಂಞಿ ಮೋನು, ಮಾಜಿ ಸದಸ್ಯರುಗಳಾದ ಪೊಡಿಮೋನು, ಉಸ್ಮಾನ್ ಕಲ್ಲಾಪು, ಕಾಂಗ್ರೆಸ್ ಮುಖಂಡರುಗಳಾದ ವಾರಿಜಾ.ಬಿ. ಸುವರ್ಣ, ದೇವಕಿ ಆರ್. ಉಳ್ಳಾಲ್, ಸತ್ಯವತಿ, ಗುತ್ತಿಗೆದಾರರಾದ ಗೋಕುಲ್ ದಾಸ್ ಭಂಡಾರ್ಕರ್, ಇಬ್ರಾಹಿಂ ಹೆಜಮಾಡಿ ಉಪಸ್ಥಿತರಿದ್ದರು.
ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ದುಆ ನೆರವೇರಿಸಿದರು. ಅಹ್ಮದ್ ಬಾವಾ ಕೊಟ್ಟಾರ ಕಾರ್ಯಕ್ರಮ ನಿರೂಪಿಸಿದರು.