ಕೆ.ಸಿ.ರೋಡು: ಯು.ಟಿ.ಖಾದರ್ ಬಳಗದಿಂದ ವೈದ್ಯಕೀಯ ಶಿಬಿರ
ಉಳ್ಳಾಲ, ನ. 4: ಇಂದು ನಾವು ಸೇವಿಸುವ ಅನಗತ್ಯ ಆಹಾರ, ಅನಗತ್ಯ ನಿದ್ದೆ ಸಹಿತ ಇಂದಿನ ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮುಳ್ಳುಗುಡ್ಡೆ ಅಲ್ ಹಿದಾಯ ಜುಮಾ ಮಸೀದಿ ಅಧ್ಯಕ್ಷ ಎನ್.ಎಸ್.ಉಮ್ಮರ್ ಮಾಸ್ಟರ್ ಅಭಿಪ್ರಾಯಪಟ್ಟರು.
ಅಜ್ಜಿನಡ್ಕ ಯು.ಟಿ.ಖಾದರ್ ಅಭಿಮಾನಿ ಬಳಗ, ದೇರಳಕಟ್ಟೆ ರೋಟರಿ ಕ್ಲಬ್ ಹಾಗೂ ಯೇನೆಪೊಯ ವೈದ್ಯಕೀಯ ಮತ್ತು ದಂತ ಕಾಲೇಜಿನ ಸಹಭಾಗಿತ್ವದಲ್ಲಿ ಭಾನುವಾರ ಅಜ್ಜಿನಡ್ಕ ಶಾಲೆಯಲ್ಲಿ ನಡೆದ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಆರೋಗ್ಯ ಎನ್ನುವುದು ಸುಲಭವಾಗಿ ಸಿಗುವ ವಸ್ತುವಲ್ಲ, ಮನುಷ್ಯ ಆರೋಗ್ಯವಂತನಾಗಿರಬೇಕಾದರೆ ಮಾನಸಿಕ, ದೈಹಿಕ ನೆಮ್ಮದಿಯೂ ಅಗತ್ಯ, ಸಾಮಾಜಿಕವಾಗಿ ತೊಡಗಿಸಿಕೊಂಡಾಗ ಇಂತಹ ಅವಕಾಶ ಸಿಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಆಲ್ವಿನ್ ಡಿಸೋಜ ಮಾತನಾಡಿ, ಹಿಂದೆ ಹಣ ಇರದಿದ್ದರೂ ಆರೋಗ್ಯ ಇತ್ತು. ಆದರೆ ಇಂದು ಹಣವಿದೆ, ಆರೋಗ್ಯ ಇಲ್ಲ. ಆರೋಗ್ಯವಂತ ಮನುಷ್ಯನೇ ಶ್ರೀಮಂತನಾಗಿದ್ದಾನೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ ಆಂಚನ್, ಕಾರ್ಯದರ್ಶಿ ಜಯಪ್ರಕಾಶ್, ಯೇನೆಪೊಯ ವೈದ್ಯಕೀಯ ಕಾಲೇಜಿನ ಡಾ.ಪೂನಂ ನಾಯಕ್, ಕೋಟೆಕಾರ್ ಪ.ಪಂ. ಸದಸ್ಯರಾದ ಹಮೀದ್ ಹಸನ್ ಮಾಡೂರು, ಮೊಯ್ದೀನ್ ಬಾವ, ಡಿ.ಎಂ.ಅಸ್ಲಂ, ಪ್ರಮುಖರಾದ ಉಮೇಶ್ ಗಾಂಭೀರ್, ಸುಲೈಮಾನ್, ಮೊಹಮ್ಮದ್ ಬಾವ, ಎಸ್.ಬಿ.ಮೊಹಮ್ಮದ್ ಹನೀಫ್, ಎಚ್.ಇಬ್ರಾಹಿಂ, ಕೆ.ಎಸ್.ಶಬೀರ್, ಯು.ಬಿ.ರಶೀದ್, ಕಾರ್ಯಕ್ರಮ ಸಂಘಟಕರಾದ ಜಮಾಲ್ ಅಜ್ಜಿನಡ್ಕ, ಬಾತಿಷ್ ಸುಲೈಮಾನ್, ಬಶೀರ್ ಮುಳ್ಳುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು. ಸಂಘಟಕ ಅಹ್ಮದ್ ಅಜ್ಜಿನಡ್ಕ ಸ್ವಾಗತಿಸಿದರು. ಹನೀಫ್ ಕಾರ್ಯಕ್ರಮ ನಿರೂಪಿಸಿದರು.