12 ಸಾಧಕರಿಗೆ 'ಆಳ್ವಾಸ್ ನುಡಿಸಿರಿ ಪ್ರಶಸ್ತಿ'
ಮೂಡುಬಿದಿರೆ, ನ.7: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಕನ್ನಡ ನಾಡುನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2018ರ ಅಂಗವಾಗಿ ನೀಡಲಾಗುವ ಆಳ್ವಾಸ್ ನುಡಿಸಿರಿ ಪುರಸ್ಕಾರವನ್ನು ಈ ಬಾರಿ ಕನ್ನಡ ನಾಡು, ನುಡಿಗೆ ಶ್ರಮಿಸಿದ 12 ಸಾಧಕರಿಗೆ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಾ.ಜಿ.ಡಿ.ಜೋಶಿ ಮುಂಬೈ(ಸಾಹಿತ್ಯ, ಶಿಕ್ಷಣ), ಡಾ.ಎ.ವಿ.ನರಸಿಂಹಮೂರ್ತಿ ಮೈಸೂರು(ಇತಿಹಾಸ ತಜ್ಞ), ಡಾ.ಭಾರತಿ ವಿಷ್ಣುವರ್ಧನ್ ಬೆಂಗಳೂರು(ಸಿನೆಮಾ), ಡಾ.ಅರುಂಧತಿ ನಾಗ್ (ರಂಗಭೂಮಿ), ಎಲ್.ಬಂದೇನವಾಝ್ ಖಲೀಪ್ ಆಲ್ದಾಳ ಕಲಬುರಗಿ (ರಂಗ ನಿರ್ದೇಶನ), ಡಾ.ಕೆ.ರಮಾನಂದ ಬನಾರಿ ಕಾಸರಗೋಡು(ಸಾಹಿತ್ಯ), ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ(ಸಾಹಿತ್ಯ, ವಿಮರ್ಶೆ), ಪ್ರೊ.ಎ.ವಿ.ನಾವಡ ಮಂಗಳೂರು(ಸಾಹಿತ್ಯ), ಫಾ.ಪ್ರಶಾಂತ್ ಮಾಡ್ತ(ಸಾಹಿತ್ಯ ಸೇವೆ) ಹೊ.ನಾ.ರಾಘವೇಂದ್ರ (ಸುಗಮ ಸಂಗೀತ), ಅರುವ ಕೊರಗಪ್ಪ ಶೆಟ್ಟಿ(ಯಕ್ಷಗಾನ) ಡಾ.ಮೈಸೂರು ನಟರಾಜ, ವಾಷಿಂಗ್ಟನ್(ಸಾಹಿತ್ಯ ಸೇವೆ) ಪ್ರಶಸ್ತಿಗೆ ಆಯ್ಕೆಯಾದ ಸಾಧಕರು.
ನವೆಂಬರ್ 18ರಂದು ಸಂಜೆ ನಡೆಯುವ ಆಳ್ವಾಸ್ ನುಡಿಸಿರಿ ಸಮಾರೋಪ ಸಮಾರಂಭದಲ್ಲಿ ಈ ಸಾಧಕರನ್ನು 25,000 ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ನುಡಿಸಿರಿ ಸ್ವಾಗತ ಸಮಿತಿಯ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿಆರ್ಒ ಡಾ.ಪದ್ಮನಾ ಶೆಣೈ ಉಪಸ್ಥಿತರಿದ್ದರು.