ಮಂಗಳೂರು: ವಿದ್ವಾನ್ ಕಾಂತ ರೈ ಸಂಸ್ಮರಣೆ
ಮಂಗಳೂರು, ನ.12: ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಯ ಮಾತುಗಾರಿಕೆಯಲ್ಲಿ ಕನ್ನಡ ಭಾಷೆಯ ಪ್ರೌಢಿಮೆ ಎದ್ದು ಕಾಣುತ್ತದೆ. ಅದರಲ್ಲೂ ತಾಳಮದ್ದಳೆ ಕ್ಷೇತ್ರಕ್ಕೆ ವಿದ್ವಾಂಸರ ಪ್ರವೇಶದಿಂದಾಗಿ ಅದು ಹೆಚ್ಚು ಜನಪ್ರಿಯವಾಗಲು ಸಾಧ್ಯವಾಯಿತು. ಅಂತಹ ತಾಳಮದ್ದಳೆ ದಿಗ್ಗಜರಲ್ಲಿ ವಿದ್ವಾನ್ ಕಾಂತ ರೈಯವರ ಹೆಸರು ಮುಂಚೂಣಿಯಲ್ಲಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ನಗರದ ಎಸ್ಡಿಎಂ ಲಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ ಆರನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ಮೂಡುಬಿದಿರೆಯ ವಿದ್ವಾನ್ ಕಾಂತ ರೈಗೆ ರವಿವಾರ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ ನುಡಿನಮನ ಸಲ್ಲಿಸಿದರು.ಬೋಳಾರ ಹಳೆ ಕೋಟೆ ಶ್ರೀ ಮಾರಿಯಮ್ಮ ಮಹಿಷ ಮರ್ದಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ, ಉದ್ಯಮಿಗಳಾದ ನವೀನ್ ಕಿಲ್ಲೆ, ಎನ್. ಸಂತೋಷ್ ಕುಮಾರ್ ರೈ, ಸಿ.ಎಸ್.ಭಂಡಾರಿ ಇರಾ, ಮಧುಕರ ರೈ ಕೊರೆಕಾನ, ಕೆ.ಕಾಂತ ರೈ ಸ್ಮಾರಕ ಸಮಿತಿಯ ಕೆ.ಗಣೇಶ ರೈ ಹೊಸಂಗಡಿ ಮತ್ತು ವಿಶಾಲಕೀರ್ತಿ ರೈ, ಕೋಶಾಧಿ ಕಾರಿ ಎಂ.ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಪದಾಧಿಕಾರಿಗಳಾದ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಉಮೇಶಾಚಾರ್ಯ ಗೇರುಕಟ್ಟೆ,ಸಿದ್ಧಾರ್ಥ ಅಜ್ರಿ, ಮಧುಸೂದನ ಅಲೆವೂರಾಯ,ಪೂರ್ಣೇಶ ಆಚಾರ್ಯ ಉಪಸ್ಥಿತರಿದ್ದರು.
ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಕೆ.ಲಕ್ಷ್ಮಿನಾರಾಯಣ ರೈ ಹರೇಕಳ ವಂದಿಸಿದರು. ಮಹಿಳಾ ಪ್ರತಿನಿಧಿ ನಿವೇದಿತಾ ಎನ್.ಶೆಟ್ಟಿ ನಿರೂಪಿಸಿದರು.