ಯುಪಿಸಿಎಲ್ ಇಂಜಿನಿಯರ್ ಗೆ ತಂಡದಿಂದ ಹಲ್ಲೆ
ಪಡುಬಿದ್ರೆ, ನ. 12: ಅದಾನಿ ಯುಪಿಸಿಎಲ್ ಕಂಪನಿಯಲ್ಲಿ ಸೈಟ್ ಇಂಜಿನಿಯರ್ ಓರ್ವರಿಗೆ ತಂಡವೊಂದು ಹಲ್ಲೆ ಮಾಡಿ ಬೆದರಿಕೆಯೊಡ್ಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಪೆಂಚಲ್ ರೆಡ್ಡಿ ಹಲ್ಲೆ ಗೊಳಗಾದ ವ್ಯಕ್ತಿ.
ದೀಪಕ್, ಪ್ರತೀಕ್, ಕಿರಣ್ ಹಾಗೂ ಮತ್ತೊರ್ವ ಹಲ್ಲೆ ನಡೆಸಿದ ಆರೋಪಿಗಳು ಎಂದು ತಿಳಿದುಬಂದಿದೆ. ಪೆಂಚಲ್ ಎಂಬವರು ತಮ್ಮ ಕೆಲಸ ಮುಗಿಸಿಕೊಂಡು 4 ಜನ ಸಹೋದ್ಯೋಗಿಗಳೊಂದಿಗೆ ವಾಹನದಲ್ಲಿ ಪಡುಬಿದ್ರಿ ಕಡೆಗೆ ಸಂಚರಿಸುತಿದ್ದಾಗ ಆರೋಪಿಗಳು ನಂದಿಕೂರು ಪೇಟೆಯ ದುರ್ಗಾ ಪರಮೇಶ್ವರೀ ದೇವಸ್ಥಾನದ ಸ್ವಾಗತ ಕಮಾನಿನ ಬಳಿ ವಾಹನವನ್ನು ತಡೆದು ಒಳ ರಸ್ತೆಗೆ ತೆಗೆದುಕೊಂಡು ಹೋಗಿ ವಾಹನದಲ್ಲೇ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ.
ಬೋನಸ್ ಕೊಡದಿದ್ದರೆ ಬಿಡುವುದಿಲ್ಲ ಎಂದು ಅವ್ಯಾಚ್ಯ ಶಬ್ಧಗಳಿಂದ ಬೈದು ಬೆದರಕೆ ಹಾಕಿದಲ್ಲದೆ, ದೀಪಕ್ ಎಂಬಾತ ಎಳೆದಾಡಿ ಎದೆಗೆ ಕೈಯಿಂದ ಗುದ್ದಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story