ಮಣಿಪಾಲ: 16ರಿಂದ ಮಾಹೆ ಘಟಿಕೋತ್ಸವ
ಉಡುಪಿ, ನ.13: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ 26ನೇ ಘಟಿಕೋತ್ಸವ ನ.16ರಿಂದ ಮೂರು ದಿನಗಳ ಕಾಲ ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ನಡೆಯಲಿದೆ. ಮೂರೂ ದಿನಗಳಂದು ಅಪರಾಹ್ನ 3 ಗಂಟೆಗೆ ಪದವಿ ಪಡೆಯುವ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರ ಉಪಸ್ಥಿತಿಯಲ್ಲಿ ಘಟಿಕೋತ್ಸವ ಸಮಾರಂಭ ಪ್ರಾರಂಭಗೊಳ್ಳಲಿದೆ ಎಂದು ಮಾಹೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತಿ ದಿನ 1300ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ. ಒಟ್ಟಾರೆಯಾಗಿ ಮೂರು ದಿನಗಳಂದು 4156 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇನ್ನೂ 928 ಮಂದಿ ಅಂಚೆ ಮೂಲಕ ಪದವಿ ಸ್ವೀಕರಿಸಲಿದ್ದಾರೆ.
ಮಾಹೆಯ 9 ಮಂದಿ ಪದವಿ ವಿದ್ಯಾರ್ಥಿಗಳು ಹಾಗೂ ಮೂವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಡಾ.ಟಿಎಂಎ ಪೈ ಚಿನ್ನದ ಪದಕವನ್ನು ನೀಡಿ ಗೌರವಿಸ ಲಾಗುವುದು. ಸಮಾರಂಭದಲ್ಲಿ ಒಟ್ಟು 85 ಮಂದಿಗೆ ಡಾಕ್ಟರೇಟ್ ಪದವಿ ನೀಡಲಾಗುವುದು. ಘಟಿಕೋತ್ಸವ ಸಮಾರಂಭಕ್ಕೆ ಮಣಪಾಲ ಗ್ರೀನ್ಸ್ನಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಘಟಿಕೋತ್ಸವ ಸಮಾರಂಭದಲ್ಲಿ ನ.16ರಂದು ಬೆಂಗಳೂರಿನ ಮಣಿಪಾಲ ಹೆಲ್ತ್ ಎಂಟರ್ಪ್ರೈಸಸ್ನ ಅಧ್ಯಕ್ಷ ಡಾ.ಎಚ್.ಸುದರ್ಶನ ಬಲ್ಲಾಳ್, 17ರಂದು ರಾಜಸ್ತಾನ ಬಿಟ್ಸ್ ಪಿಲಾನಿಯ ಕುಲಪತಿ ಪ್ರೊ.ಸೌವಿಕ್ ಭಟ್ಟಾಚಾರ್ಯ ಹಾಗೂ 18ರಂದು ಬೆಂಗಳೂರು ಮೈಂಡ್ ಟ್ರೀಯ ಸಹ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷ ಕೃಷ್ಣಕುಮಾರ ನಟರಾಜನ್ ಮುಖ್ಯಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.