ಮಣಿಪಾಲ: ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ರ್ಯಾಲಿ
ಉಡುಪಿ, ನ.13: ಪ್ರತಿಯೊಂದು ಮಗುವಿನಲ್ಲೂ ಒಂದು ವಿಶೇಷವಾದ ಪ್ರತಿಭೆ ಮತ್ತು ಸಾಮರ್ಥ್ಯವಿರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಆ ಮಗು ಸಮಾಜಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಬಹುದು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯು ವಿದ್ಯಾರ್ಥಿಗಳ ಪ್ರತಿಭೆಯ ಅಭಿವ್ಯಕ್ತಿ ಹಾಗೂ ಅಭಿವೃದ್ಧಿಗೆ ಉತ್ತಮವಾದ ವೇದಿಕೆಯಾಗಿದೆ ಎಂದು ಉಡುಪಿ ಜಿಲ್ಲಾ ಸ್ಕೌಟ್ಸ್ ಆಯುಕ್ತ ಡಾ. ವಿಜಯೇಂದ್ರ ವಸಂತ್ ಹೇಳಿದ್ದಾರೆ.
ಮಣಿಪಾಲ ಸಮೀಪದ ಪೆರಂಪಳ್ಳಿಯಲ್ಲಿರುವ ಟ್ರಿನಿಟಿ ಸೆಂಟ್ರಲ್ ಸ್ಕೂಲ್ನಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಎರಡು ದಿನಗಳ ಸ್ಕೌಟ್ಸ್ ಮತ್ತು ಗೈಡ್ಸ್ ರ್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಮಾರಂದ ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ. ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳು ಎಳವೆಯಲ್ಲಿ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಎಡ್ವಿನ್ ಆಳ್ವ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ಶಾಲೆಯ ಕೋಶಾಧಿಕಾರಿ ರವಿ ರಾಜೇಶ್ ಮಾತನಾಡಿದರು. ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜೆ ಪೈ, ಶಿಬಿರದ ನಿರ್ದೇಶಕ ಅನಂದ ಅಡಿಗ, ಕಲ್ಯಾಣಪುರ ಸ್ಥಳೀಯಸಂಸ್ಥೆ ಕಾರ್ಯದರ್ಶಿ ಪ್ಲೋರಿನ್ ಡಿಸಿಲ್ವ ಉಪಸ್ಥಿತರಿದ್ದರು.
ಶಿಬಿರದ ಗೈಡ್ಸ್ ವಿಭಾಗದ ನಾಯಕಿ ಪೂರ್ಣಿಮ ಶಿಬಿರದ ಮುನ್ನೋಟ ನೀಡಿದರು. ಸ್ಕೌಟ್ಸ್ ವಿಭಾಗದ ನಾಯಕಿ ಅರ್ಚನಾ ವಂದಿಸಿದರು. ದೀಪ್ತಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯಾದ್ಯಂತದ 750 ಸ್ಕೌಟ್ಸ್ ಮತ್ತು 75 ಮಂದಿ ಗೈಡ್ಸ್ ಶಿಕ್ಷಕರು ಶಿಬಿರದಲ್ಲಿ ಭಾಗವಹಿಸಿದ್ದರು.