ಜಾಗೃತ ಮನಸ್ಸಿನ ಅರಳುವಿಕೆಯಿಂದ ಸ್ಮರಣಶಕ್ತಿ ವೃದ್ಧಿ: ಸುಬ್ರಹ್ಮಣ್ಯ
ಶಿರ್ವ, ನ.13: ಮನುಷ್ಯರಲ್ಲಿ ಬುದ್ದಿವಂತ, ದಡ್ಡ ಎಂಬ ವ್ಯತ್ಯಾಸಗಳಿಲ್ಲ. ಮನುಷ್ಯನ ಮೆದುಳಿನಲ್ಲಿ ಅತ್ಯದ್ಭುತ ಸಾಮರ್ಥ್ಯವಿದೆ. ನಮ್ಮ ಕಲ್ಪನಾಶಕ್ತಿಯೇ ವಿಸ್ಮಯವಾಗಿದೆ. ಕಲ್ಪನೆಯ ಮೇಲೆ ನಂಬಿಕೆ ಬೆಳೆದಾಗ ಅದು ಧನಾತ್ಮಕವಾಗಿ ಪರಿವರ್ತನೆಗೊಳ್ಳುತ್ತದೆ. ಜಾಗೃತ ಮನಸ್ಸಿನ ಅರಳುವಿಕೆಯಿಂದ ಸ್ಮರಣಶಕ್ತಿ ವೃದ್ಧಿಸುತ್ತದೆ ಎಂದು ಬೆಂಗಳೂರು ಗ್ರೇಸ್ ಅಕಾಡೆಮಿ ನಿರ್ದೇಶಕ, ರಾಷ್ಟ್ರೀಯ ತರಬೇತುದಾರ ಸುಬ್ರಹ್ಮಣ್ಯ ಕೆ. ಹೇಳಿದ್ದಾರೆ.
ಪಡುಬೆಳ್ಳೆ ಶ್ರೀನಾರಾಯಣಗುರು ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗಾಗಿ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ಸೋಮವಾರ ಏರ್ಪಡಿಸಲಾದ ಅಧ್ಯಯನ ಕ್ರಮ, ಸ್ಮರಣಶಕ್ತಿ, ಪರೀಕ್ಷೆ ಎದುರಿಸು ವಿಕೆ, ಹಾಗೂ ಭವಿಷ್ಯದ ಗುರಿಯ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪ್ರಾತಿಕಿಕ್ಷೆ ಮೂಲಕ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಜಿನರಾಜ್ ಸಾಲಿಯನ್, ಉಭಯ ಇಂಟರ್ಯಾಕ್ಟ್ ಅಧ್ಯಕ್ಷರುಗಳಾದ ನಿಧಿ ಶೆಟ್ಟಿ, ಪ್ರಥ್ವಿ ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಸಭಾಪತಿ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಅರುಂಧತಿ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಉಷಾ ಎಸ್. ವಂದಿಸಿದರು.