ನ.18ರಂದು ಮಧುಮೇಹ ದಿನದ ಪ್ರಯುಕ್ತ ವಾಕಾಥಾನ್
ಉಡುಪಿ, ನ.13: ಲಯನ್ಸ್ ಜಿಲ್ಲೆ 317ಸಿ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನದ ಪ್ರಯುಕ್ತ ಕಿನ್ನಿಮುಲ್ಕಿಯಿಂದ ನಗರದ ಬೋರ್ಡ್ ಹೈಸ್ಕೂಲ್ವರೆಗೆ ಕಾಲ್ನಡಿಗೆ (ವಾಕಾಥಾನ್)ಯನ್ನು ನ.18ರಂದು ಬೆಳಗ್ಗೆ 7:30ಕ್ಕೆ ಏರ್ಪಡಿಸಲಾಗಿದೆ.
ಕಾಲ್ನಡಿಗೆಯನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಲಯನ್ಸ್ ಜಿಲ್ಲಾ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಲಿರುವರು. ಬೆಳಗ್ಗೆ 9ಗಂಟೆಗೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ ಎಂದು ಲಯನ್ಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನೀಲ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಲಯನ್ಸ್ ಸಂಸ್ಥೆಯಿಂದ ನ.14ರಿಂದ 20ರವರೆಗೆ ಮಧುಮೇಹ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ಲಯನ್ಸ್ ಜಿಲ್ಲಾ ವ್ಯಾಪ್ತಿಯ ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಕಂದಾಯ ಜಿಲ್ಲೆಗಳಲ್ಲಿರುವ 86 ಕ್ಲಬ್ ಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ, ಪ್ರಾಂತೀಯಾಧ್ಯಕ್ಷ ಡಾ.ನೇರಿ ಕರ್ನೆಲಿಯೋ, ಉಪಾಧ್ಯಕ್ಷ ಹರಿಪ್ರಸಾದ್ ರೈ, ಎಸ್.ಟಿ.ಕರ್ಕೇರ, ಟಿ.ಎನ್.ಆಚಾರ್ಯ, ಎನ್.ಎಂ.ಹೆಗ್ಡೆ ಉಪಸ್ಥಿತರಿದ್ದರು.