ಉಡುಪಿ: ಗೋದಾನದ ಮೂಲಕ ಪುಣ್ಯಕೋಟಿ ಬಳಗದಿಂದ ಗೋಪೂಜೆ
ಉಡುಪಿ, ನ.14: ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋಸೇವಾ ಬಳಗವು ಪ್ರತಿವರ್ಷದಂತೆ ಈ ಬಾರಿಯೂ ದೀಪಾವಳಿಯ ಗೋಪೂಜೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಇತ್ತೀಚೆಗೆ ತಾವು ಪ್ರೀತಿಯಿಂದ ಸಾಕಿದ ಗೋವನ್ನು ಕಳೆದುಕೊಂಡು ದುಃಖದಲ್ಲಿರುವ ಇಲ್ಲಿನ ಬೈಲೂರು ಮಹಿಷಮರ್ಧಿನಿ ದೇವಸ್ಥಾನದ ಸಮೀಪದ ನಿವಾಸಿಗಳಾದ ವಾರಿಜಾ ಲಕ್ಷಣ ಆಚಾರ್ಯ ಇವರಿಗೆ ಗೋವೊಂದನ್ನು ದಾನ ನೀಡುವ ಮೂಲಕ ಈ ಗೋಸೇವಾ ಬಳಗ ದೀಪಾವಳಿುನ್ನು ಸಾರ್ಥಕ ರೀತಿಯಲ್ಲಿ ಆಚರಿಸಿತು.
ಇದೇ ಸಂದರ್ಭದಲ್ಲಿ ಹೈನುಗಾರರಾದ ರಾಜಣ್ಣ ಎಂಬವರ ಮನೆಯಲ್ಲಿ ಗೋಪೂಜೆ ನಡೆಸಿ, ದಾನಿಯೊಬ್ಬರು ತಮ್ಮ ಮಗನ ಹುಟ್ಟು ದಿನದ ಪ್ರಯುಕ್ತ ನೀಡಿದ 25 ಕೆಜಿ ಪಶುಆಹಾರವನ್ನು ಅವರಿಗೆ ಹಸ್ತಾಂತರಿಸಲಾಯಿತು.
ಕಳೆದ ಮೂರು ವರ್ಷಗಳಿಂದ ಪುಣ್ಯಕೋಟಿ ಗೋಸೇವಾ ಬಳಗದ ಸದಸ್ಯರು, ಪ್ರತಿ ತಿಂಗಳಿಗೊಮ್ಮೆ ಉಡುಪಿಯ ಸುತ್ತಮುತ್ತಲಿನಲ್ಲಿ ಗೋವುಗಳನ್ನು ಸಾಕುತ್ತಿರುವ ಬಡ ಹೈನುಗಾರರ ಮನೆಗೆ ಹೋಗಿ ಗೋಪೂಜೆ ನೆರವೇರಿಸುತ್ತಾ, ತಾವೇ ಹಣ ಸಂಗ್ರಹಿಸಿ ಅದನ್ನು ಗೋಪಾಲಕರಿಗೆ ಗೋಕಾಣಿಕೆಯ ರೂಪದಲ್ಲಿ, ದಾನಿಗಳ ಸಹಾಯದಿಂದ ಹಿಂಡಿ ಮುಂತಾದ ಗೋಗ್ರಾಸವನ್ನು ನೀಡುತ್ತಿದ್ದಾರೆ. ಈ ಮೂಲಕ ದೇಶಿ ತಳಿಗಳ ಉಳಿವಿಗೆ, ಸಾವಯವ ಕೃಷಿಗೆ ಪ್ರೋತ್ಸಾಹ ನೀಡುತಿದ್ದಾರೆ.
ಈ ಬಾರಿಯ ದೀಪಾವಳಿಯ ಗೋಪೂಜೆಯಲ್ಲಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಗಣೇಶ ದೇವಾಡಿಗ ಅಂಬಲಪಾಡಿ, ಬೈಲೂರು ಮಹಿಷ ಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಶೆಟ್ಟಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದರು. ಗೋಸೇವಾ ಬಳದ ಜ್ಯೋತಿ ಸತೀಶ್ ದೇವಾಡಿಗ, ಸರೋಜ ಯಶವಂತ್, ತಾರಾ ಉಮೇಶ್ ಆಚಾರ್ಯ, ಅನಿತಾ, ರಂಜನಿ ಆಚಾರ್ಯ, ಜಯಶೀಲ, ಆಶಾ ಸದಾನಂದ ಶೆಟ್ಟಿ, ಸುಮನ ದೇವಾಡಿಗ, ಲತಾ ಅರುಣ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.