ವಿಕಾಸ್ ಕಾಲೇಜ್: 10ನೇ ಸ್ವಯಂ ಪ್ರೇರಿತ ಜನಜಾಗೃತಿ ಸೈಕಲ್ ಜಾಥಾಗೆ ಚಾಲನೆ
ಮಂಗಳೂರು, ನ.14: ನಗರದ ವಿಕಾಸ್ ಕಾಲೇಜಿನಲ್ಲಿ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ತಾಲೂಕು ಬಳಕೆದಾರರ ಹಿತರಕ್ಷಣಾ ಸಂಘ ದೊಡ್ಡಬಳ್ಳಾಪುರ ಹಾಗೂ ಸೇವಾಧ್ವನಿ ಉಡುಪಿ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಳ್ಳಲಾದ 10ನೇ ಸ್ವಯಂ ಪ್ರೇರಿತ ಜನಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಸಂಯೋಜಕ ಬದ್ರೀನಾಥ್ ಮಾತನಾಡಿ, ಮಾನವನಿಗೆ ಪ್ರಕೃತಿ ಕೊಡುಗೆಯಾಗಿದೆ. ಮಾನವರು ಪ್ರಕೃತಿಯಿಂದ ದೂರ ಸರಿಯುತ್ತಿದ್ದು, ನಮಗರಿವಿಲ್ಲದೆ ಪರೋಕ್ಷವಾಗಿ ಜಂಕ್ಫುಡ್ ಸೇವಿಸುತ್ತಿದ್ದೇವೆ. ಇದು ಆರೋಗ್ಯಕ್ಕೆ ಮಾರಕವಾಗಿದೆ ಎಂದರು.
ರೆಡ್ಎಫ್ಎಂನ ಆರ್ಜೆ ನಯನಾ ಜಂಕ್ ಪುಡ್ ಗಳ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ವಿಕಾಸ್ ಸಮೂಹ ಸಂಸ್ಥೆಯ ಟ್ರಸ್ಟಿಗಳಾದ ಜೆ.ಕೊರಗಪ್ಪ, ವಿಕಾಸ್ ಸಮೂಹ ಸಂಸ್ಥೆಯ ಡೀನ್ ಹಾಗೂ ಕೌನ್ಸೆಲರ್ ಡಾ.ಮಂಜುಳಾ ರಾವ್, ವಿಕಾಸ್ ಸಮೂಹ ಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಪ್ರಾಂಶುಪಾಲ ರಾಜಾರಾಮ್ ರಾವ್, ಡಾ.ಸುನಿಲ್ ಮಾಳಗಿ, ಚಿದಾನಂದ್, ಮೋಹನಕುಮಾರ್, ಎ.ವಿ. ರಘು, ಪ್ರತಾಪ್, ವಿನಯ್ ಚಂದ್ರ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಅಜಿತ್ ರೈ ಸ್ವಾಗತಿಸಿ, ನಿರೂಪಿಸಿದರು. ಈ ಜಾಥಾ ಮಂಗಳೂರಿನಿಂದ ಕುಂದಾಪುರದ ಮಾರ್ಗವಾಗಿ ಸಾಗಿತು.