ಮಧುಮೇಹ ಕಾಯಿಲೆ ಬಗ್ಗೆ ಜಾಗೃತಿ ಕಾರ್ಯ ಆಗಬೇಕಿದೆ: ಡಾ.ಶ್ರೀಕಾಂತ್
ಕೊಣಾಜೆ, ನ.15: ಮಧುಮೇಹ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ಮಧುಮೇಹ ರೋಗ ಬರದ ಹಾಗೆ ಜಾಗೃತಿ ಮೂಡಿಸುವುದು ಯುವ ವೈದ್ಯರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಡಾ.ಶ್ರೀಕಾಂತ್ ಆಚಾರ್ಯ ಅಭಿಪ್ರಾಯಪಟ್ಟರು.
ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ಸಮುದಾಯ ಆರೋಗ್ಯ ವಿಭಾಗದ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಗ್ಲಾಸ್ ಹೌಸ್ನಲ್ಲಿ ಬುಧವಾರ ನಡೆದ ನಡೆದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಧುಮೇಹ ಹೇಗೆ ಬರುತ್ತದೆ, ಅದರ ಲಕ್ಷಣಗಳೇನು ಎನ್ನುವ ತಿಳುವಳಿಕೆ ಜನರಿಗೆ ನೀಡುವ ಕಾರ್ಯ ಕಳೆದ ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಕಳೆದ ಹಲವು ವರ್ಷಗಳಿಂದ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಾ ಬಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅದರಲ್ಲೂ ಯುವ ವೈದ್ಯರು ಮಧುಮೇಹ ರೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಜನರಿಗೆ ನೀಡುವ ಕಾರ್ಯ ಮಾಡಬೇಕು ಎಂದರು.
ಕೆ.ಎಸ್. ಮೆಡಿಕಲ್ ಅಕಾಡಮಿಯ ವೈಸ್ ಡೀನ್ಗಳಾದ ಡಾ.ಎ.ಎಂ.ಮಿರಾಜ್ಕರ್, ಡಾ. ಜಯಪ್ರಕಾಶ್ ಶೆಟ್ಟಿ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ.ಶಿವಕುಮಾರ್ ಹಿರೇಮಠ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ನೃತ್ಯದ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಕ್ಷೇಮ ಕಮ್ಯುನಿಟಿ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ.ಸಂಜೀವ ಬಡಿಗೇರ್ ಸ್ವಾಗತಿಸಿದರು. ಡಾ.ಶಾಂಭವಿ ಭಾರದ್ವಜ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ರಶ್ಮಿ ಕುಂದಾಪುರ್ ವಂದಿಸಿದರು.