ನಾಳೆಯಿಂದ 3 ದಿನಗಳ ಆಳ್ವಾಸ್ ನುಡಿಸಿರಿ-2018
ಕನ್ನಡ ನಾಡು ನುಡಿಯ ಹಬ್ಬಕ್ಕೆ ವಿದ್ಯಾಗಿರಿ ಸಜ್ಜು
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ನುಡಿಸಿರಿಗೆ ಆಗಮಿಸುವ ಸಾಹಿತ್ಯಾಭಿಮಾನಿಗಳನ್ನು ಸ್ವಾಗತಿಸಲು ರಚಿಸಿದ ಪ್ರವೇಶ ದ್ವಾರ
ಮೂಡುಬಿದಿರೆ, ನ.15: ಕನ್ನಡ ನಾಡು-ನುಡಿ, ಸಂಸ್ಕೃತಿಯ ದಿಗ್ದರ್ಶನಕ್ಕೆ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ 2018’ಕ್ಕೆ ಚಾಲನೆ ಸಿಗಲಿದೆ.
ಮೂರು ದಿನಗಳ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ-2018’ ಇದರ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಲು ಇಲ್ಲಿನ ವಿದ್ಯಾಗಿರಿ ಮದುವಣಗಿತ್ತಿಯಂತೆ ಶೃಂಗರಿಸಲ್ಪಟ್ಟಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಈ ಬಾರಿಯ ನುಡಿಸಿರಿಯನ್ನು ‘ಕರ್ನಾಟಕ ದರ್ಶನ-ಬಹುರೂಪಿ ಆಯಾಮಗಳು’ ಪರಿಕಲ್ಪನೆಯಲ್ಲಿ ಹಮ್ಮಿಕೊಂಡಿದ್ದಾರೆ. ಡಾ.ಮಲ್ಲಿಕಾ ಎಸ್. ಘಂಟಿ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಡಾ.ಷ.ಶೆಟ್ಟರ್ ಉದ್ಘಾಟಿಸುವರು. ಆ ಬಳಿಕ 7 ವೇದಿಕೆಗಳಲ್ಲಿ ಏಕಕಾಲದಲ್ಲಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ವಿವಿಧೆಡೆಯ 170ಕ್ಕೂ ಹೆಚ್ಚಿನ ಕಲಾ ತಂಡಗಳಿಂದ ಸುಮಾರು 4 ಸಾವಿರ ಕಲಾವಿದರು ಸಾಂಸ್ಕೃತಿಕ ರಸದೌತಣ ನೀಡಲಿದ್ದಾರೆ.
ಮಳಿಗೆಗಳ ವೈಭವ: 750ಕ್ಕೂ ಅಧಿಕ ಮಳಿಗೆಗಳು ಬಂದಿದ್ದು ಇವುಗಳಲ್ಲಿ 400 ಮಳಿಗೆಗಳು ಕೃಷಿ ಹಾಗೂ ಇನ್ನಿತರ ಮಳಿಗೆಗಳು ಪುಸ್ತಕ, ಖಾದ್ಯ-ತಿನಿಸುಗಳನ್ನು ಹೊಂದಿರುವ ಜತೆಗೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೂರಾರು ಮಳಿಗೆಗಳು ತೆರೆದುಕೊಂಡು ಸಾಹಿತ್ಯಾಸಕ್ತಿಯನ್ನು ಉಲ್ಬಣಗೊಳಿಸಲಿವೆ.
ಕೃಷಿಸಿರಿ: ಕೃಷಿ ಪರಂಪರೆಯ ಉಳಿವಿಗಾಗಿ ಕೃಷಿಯ ಮಹತ್ವ ತಿಳಿಸಿಕೊಡುವ ಉದ್ದೇಶದಿಂದ ನುಡಿಸಿರಿಯಲ್ಲಿ ಕೃಷಿ ಸಿರಿಯನ್ನು ಪ್ರಧಾನ ಭಾಗವಾಗಿ ಆಯ್ದುಕೊಳ್ಳಲಾಗಿದೆ. ಕೆ.ಎಸ್.ಪುಟ್ಟಣ್ಣಯ್ಯ ಕೃಷಿ ಆವರಣದಲ್ಲಿ ಕೃಷಿ ಪರಂಪರೆ ಅನಾವರಣಗೊಳ್ಳಲಿದೆ. ಇದಕ್ಕಾಗಿ ಮೂರು ಎರೆ ಜಾಗವನ್ನು ಬಳಸಿಕೊಳ್ಳಲಾಗಿದೆ.
ಜನ ಸ್ತೋಮದ ಹರಿವು: ದಿನವೊಂದಕ್ಕೆ ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆಯನ್ನು ಸಂಘಟಕರು ಇಟ್ಟುಕೊಂಡಿದ್ದು ಇವರೆಲ್ಲರಿಗೂ ಕರಾವಳಿ ಜಿಲ್ಲಾ ಶೈಲಿಯ ಊಟದ ಸೊಗಡಿನ ವ್ಯವಸ್ಥೆ ಕಲ್ಪಿಸಲಾಗಿದೆ. 36 ಕಡೆ ಊಟದ ಕೌಂಟರನ್ನು ತೆರೆಯಲಾಗಿದ್ದು ಏಕಕಾಲಕ್ಕೆ ಸುಮಾರು 60 ಸಾವಿರ ಜನ ನೂಕು ನುಗ್ಗಲಿಲ್ಲದೆ ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ.