ಬೆಂಗರೆ: ಖಾಸಗಿ ಕ್ರೈನ್ಗಳಿಂದ ಬೋಟು ಮೇಲೆತ್ತುವಿಕೆಗೆ ಎಸ್ಡಿಪಿಐ ವಿರೋಧ
ಮಂಗಳೂರು, ನ.15: ಭಾರತ್ ಶಿಪ್ ಯಾರ್ಡ್ ಕೇವಲ ಹಡಗು ಸಂಬಂಧಿ ಕೆಲಸ ಕಾರ್ಯ ನಿರ್ವಹಿಸಬೇಕು. ಕ್ರೇನ್ ಮೂಲಕ ಬೋಟ್ಗಳನ್ನು ಮೇಲೆತ್ತಲಾಗುತ್ತಿದ್ದು, ಇದಕ್ಕೆ ಎಸ್ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸ್ಥಳೀಯವಾಗಿ ಹಲವು ವರ್ಷಗಳಿಂದ ಕಚ್ಚೇರ್ ಮೂಲಕ ಬೋಟ್ಗಳನ್ನು ಮೇಲೆತ್ತಲಾಗುತ್ತಿತ್ತು. ಇದರಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದರು. ಇದೀಗ ಕಾರ್ಮಿಕರು ಜೀವನೋಪಾಯಕ್ಕಾಗಿ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಶಿಪ್ ಯಾರ್ಡಿನಲ್ಲಿ ಯಾವುದೇ ರೀತಿಯ ಬೋಟುಗಳನ್ನು ಮೇಲೆತ್ತಬಾರದು. ಮುಂದಿನ ಮೂರು ದಿನಗಳಲ್ಲಿ ಬೋಟ್ಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು ಎಂದು ಎಸ್ಡಿಪಿಐ ಬೆಂಗರೆ ವಾರ್ಡ್ ಸಮಿತಿ ಅಧ್ಯಕ್ಷ ಸಲೀಂ ಬೆಂಗರೆ ಬಂದರು ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸದಿದ್ದಲ್ಲಿ ತೀವ್ರ ಹೋರಾಟ ನಡೆಸಬೇಕಾಗಿದೆ ಎಂದು ಎಚ್ಚರಿಸಿದ್ದಾರೆ. ನಿಯೋಗದಲ್ಲಿ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಮುನೀಬ್ ಬೆಂಗರೆ, ಮಂಗಳೂರು ದಕ್ಷಿಣ ಕ್ಷೇತ್ರ ಉಪಾಧ್ಯಕ್ಷ ಸಿದ್ದೀಕ್, ವಾರ್ಡ್ ಕಾರ್ಯದರ್ಶಿ ಆಶಿಫ್, ಹಿರಿಯರಾದ ಇಸ್ಮಾಯೀಲ್, ಹಮೀದ್, ಸಮದ್, ತಾಹಿರ್ ಉಪಸ್ಥಿತರಿದ್ದರು.