ಸಜೀಪನಡು: ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ
ಬಂಟ್ವಾಳ,ನ.16: ಸರಕಾರಿ ಪ್ರೌಢಶಾಲೆ ಸಜೀಪನಡು ಇದರ ವತಿಯಿಂದ ಶಾಲಾ ವಾರ್ಷಿಕೋತ್ಸವ ಸಮಾರಂಭವು ಎಸ್.ಡಿ.ಎಂ.ಸಿ ಅಧ್ಯಕ್ಷ ಎಸ್.ಅಬ್ಬಾಸ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಸರಕಾರಿ ಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ತಾಲೂಕು ಪಂ. ಮಾಜಿ ಅಧ್ಯಕ್ಷ ಯಶವಂತ ದೇರಾಜೆ ನೆರವೇರಿಸಿದರು. ಈ ಸಂದರ್ಭ ಎಸ್.ಡಿ.ಎಂ.ಸಿ ಅಧ್ಯಕ್ಷ ಎಸ್.ಅಬ್ಬಾಸ್ ಹಾಜಿ ಅವರನ್ನು ಶಾಲೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಲ್ಲದೇ, ಬಡತನದ ನಡುವೆಯೂ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಶಾಲೆಯ ಹಳೆ ವಿದ್ಯಾರ್ಥಿನಿ ಡಾ.ಶೈನಾಝ್, ಉಸ್ಮಾನ್ ತ್ವಾಹಿರ್ ಹಾಗೂ ನಾಸಿರ್ ಸಜಿಪರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಉಸ್ಮಾನ್ ತ್ವಾಹಿರ್ ಥರ್ಮೋಕೋಲ್ ನಿಂದ ತಯಾರಿಸಿದ ಸಜೀಪನಡು ಶಾಲೆಯ ಮಾದರಿಯನ್ನು ಪ್ರದರ್ಶಿಸಲಾಯಿತು.
ನಂತರ ಹಳೆ ವಿದ್ಯಾರ್ಥಿಗಳಾದ ಪ್ರಸ್ತುತ ಆಳ್ವಾಸ್ ವಿದ್ಯಾಸಂಸ್ಥೆಯ ವ್ಯಾಸಂಗ ಮಾಡುತ್ತಿರುವ ಮುಹಮ್ಮದ್ ಮುಸ್ತಫಾ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ಕಾನೂನು ವಿದ್ಯಾರ್ಥಿ ಅಫ್ರೀಝ್ ತಮ್ಮ ಶಾಲಾ ಜೀವನದ ಅನುಭವಗಳನ್ನು ಬಿಚ್ಚಿಟ್ಟರು. ನಾಸಿರ್ ಸಜಿಪ ಕವನ ವಾಚಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಉತ್ತಮ ಅಂಕ ಪಡೆದ ಹಾಗೂ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿಜ್ಞಾನ ಸಹಶಿಕ್ಷಕಿ ಶಂಕರಿ ಬಹುಮಾನ ವಿತರಣಾ ಕಾರ್ಯವನ್ನು ನಿರ್ವಹಿಸಿದರು. ಕನ್ನಡ ಸಹಶಿಕ್ಷಕ ಸುಧೀಶ್.ಕೆ ವರದಿ ವಾಚಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂ. ಸದಸ್ಯ ಸವಿತಾ ಹೇಮಂತ್ ಕರ್ಕೇರ, ಸಜಿಪನಡು ಗ್ರಾಮ ಪಂ. ಪಿಡಿಒ ವೀರಪ್ಪ ಗೌಡ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಎಸ್.ಎಂ ಅಬ್ಬಾಸ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮುಹಮ್ಮದ್ ಫೈರೋಝ್, ಶಾಲಾ ಮುಖ್ಯಶಿಕ್ಷಕಿ ವಿಲಾಸಿನಿ, ಎಸ್.ಡಿ.ಎಂ.ಸಿ ಸದಸ್ಯರಾದ ಅಬ್ಬಾಸ್ ಮುಸ್ಲಿಯಾರ್, ಅರ್ಫಾಝ್, ಸುಲೈಮಾನ್, ಉದ್ಯಮಿ ಹನೀಫ್ ಉಪಸ್ಥಿತರಿದ್ದರು.
ಪ್ರೌಡಶಾಲಾ ಮುಖ್ಯಶಿಕ್ಷಕ ಈರಪ್ಪ ಡಿ. ಸ್ವಾಗತಿಸಿ, ಸುಧೀಶ್ ಕೆ. ವಂದಿಸಿದರು. ಗಣಿತ ಸಹಶಿಕ್ಷಕ ಲಕ್ಷ್ಮಣ ಬೆಳಗದ್ದೆ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.