ಕಾಸರಗೋಡು : ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹತ್ಯೆ; ಆರೋಪಿ ಕಾನ್ಸ್ ಟೇಬಲ್ ಸೆರೆ
ಕಾಸರಗೋಡು, ನ. 17: ನಿವೃತ್ತ ಬ್ಯಾಂಕ್ ಮ್ಯಾನೇಜರ್ ನನ್ನು ಅವರ ಸಂಬಂಧಿಕ ಪೊಲೀಸ್ ಕಾನ್ಸ್ ಟೇಬಲ್ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ಅದೂರು ಠಾಣೆ ವ್ಯಾಪ್ತಿಯ ಕಾರಡ್ಕದಲ್ಲಿ ನಡೆದಿದೆ.
ಕೊಲೆಗೀಡಾದವರನ್ನು ಕಾರಡ್ಕ ಶಾಂತಿನಗರದ ಮಾಧವನ್ ನಾಯರ್ (59) ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ಮಾಧವನ್ ನಾಯರ್ ಅವರ ನಾದಿನಿಯ ಪುತ್ರ, ಕಾಸರಗೋಡು ನಗರ ಠಾಣೆ ಕಾನ್ಸ್ ಟೇಬಲ್ ಶ್ಯಾಮ್ (27) ಎಂಬಾತನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಮಧ್ಯಾಹ್ನ ಮನೆಗೆ ಬಂದ ಈತ ಮಾಧವನ್ ನಾಯರ್ ರನ್ನು ಇರಿದಿದ್ದು, ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ಮಾಧವನ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪರಾರಿಯಾಗಲೆತ್ನಿಸಿದ ಶ್ಯಾಮ್ ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಮಾಧವನ್ ರನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.
ಆಸ್ತಿ ವಿವಾದ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಬ್ಬರ ನಡುವೆ ಈ ಹಿಂದೆ ಆಸ್ತಿಗಾಗಿ ಜಗಳವಾಗಿತ್ತು ಎನ್ನಲಾಗಿದೆ.
ಕೊಲೆಗೀಡಾದ ಮಾಧವನ್ ನಾಯರ್ ಕಾಸರಗೋಡು ಜಿಲ್ಲಾ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದರು.