ರೈಲ್ವೇ ಹಳಿಯಲ್ಲಿ ಅಪಘಾತ: ಗಾಯಾಳು ಮೃತ್ಯು
ಪುತ್ತೂರು, ನ. 17: ಪುತ್ತೂರು ನಗರದ ಹೊರವಲಯದ ಹಾರಾಡಿ ರೈಲ್ವೇ ಮೇಲ್ಸೇತುವೆ ಬಳಿ ರೈಲ್ವೇ ಹಳಿಯ ಬದಿಯಲ್ಲಿ ತೀವ್ರ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ 11 ದಿನಗಳ ಹಿಂದೆ ಪತ್ತೆಯಾಗಿದ್ದ ಅಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆ ನಿವಾಸಿಯಾಗಿದ್ದ ದಿ. ಪಸ್ಕಳ್ ಪುತ್ರ, ಪುತ್ತೂರಿನಲ್ಲಿ ಆಟೋ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ಮೆಲ್ವಿನ್ (24) ಮೃತಪಟ್ಟ ಯುವಕ.
ನ.7ರಂದು ಬೆಳಗ್ಗೆ ಹಾರಾಡಿ ರೈಲ್ವೇ ಮೇಲ್ಸೇತುವೆಯ ಬಳಿ ರೈಲ್ವೇ ಹಳಿಯ ಬದಿಯಲ್ಲಿ ಮೆಲ್ವಿನ್ ಅವರು ಬಿದ್ದುಕೊಂಡಿದ್ದರು. ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದರು. ಅವರನ್ನು ಕಂಡ ದಾರಿಹೋಕರೊಬ್ಬರು ಪುತ್ತೂರು ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ಅಜೇಯ್ಕುಮಾರ್ ಡಿ.ಎಸ್ ಅವರು ಘಟನಾ ಸ್ಥಳಕ್ಕೆ ತೆರಳಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಾಯಾಳು ಮೆಲ್ವಿನ್ ಅವರನ್ನು ತಮ್ಮ ವಾಹನದಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೆಲ್ವಿನ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೆಲ್ವಿನ್ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.