ಬಿಜೆಪಿಯಿಂದ ನೈತಿಕತೆಯ ಪಾಠ ಬೇಕಿಲ್ಲ: ಯೋಗೀಶ್ ಶೆಟ್ಟಿ
ಉಡುಪಿ, ನ.21: ರೈತ ಪರವಾಗಿ ಯಾವತ್ತೂ ಕಾರ್ಯನಿರ್ವಹಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯನ್ನು ತಿರುಚಿ, ಅವರ ತೇಜೋವಧೆ ಮಾಡುತ್ತಿರುವ ಬಿಜೆಪಿಯವರಿಂದ ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್.ವಿ.ಶೆಟ್ಟಿ ತಿಳಿಸಿದ್ದಾರೆ.
ಬಿಜೆಪಿ ಸರಕಾರವಿದ್ದ ಸಮಯದಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿ, ಈಗ ವಿರೋಧ ಪಕ್ಷದಲ್ಲಿದ್ದುಕೊಂಡು ತಮ್ಮ ಕರ್ತವ್ಯಗಳನ್ನು ನಿರ್ವಹಿಸದೆ, ರೈತರ ಸಾಲಮನ್ನಾಕ್ಕೆ ಕೇಂದ್ರದಿಂದ ಯಾವುದೇ ಅನುದಾನವನ್ನು ತರದೆ ಮುಖ್ಯಮಂತ್ರಿ ಗಳ ತೇಜೊವಧೆ ಮಾಡುತ್ತಾ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ಬಿಜೆಪಿ ನಾಯಕರು ಬಿಡಬೇಕು ಎಂದು ಯೋಗೀಶ್ ಶೆಟ್ಟಿ ಹೇಳಿದ್ದಾರೆ.
ಮಹಿಳೆಯರ ಹಾಗೂ ರೈತರ ಬಗ್ಗೆ ಮುಖ್ಯಮಂತ್ರಿಗಳಿಗೆ ವಿಶೇಷವಾದ ಗೌರವವಿದೆ. ರೈತರ ಹಾಗೂ ಮಹಿಳೆಯರ ಬಗ್ಗೆ ಮಾತನಾಡುವ ಅರ್ಹತೆ ಮತ್ತು ನೈತಿಕತೆ ಬಿಜೆಪಿಗಿಲ್ಲ. ಕುಮಾರಸ್ವಾಮಿ ಅವರ ರೈತಪರ ನಿಲುವು ಹಾಗೂ ಧೋರಣೆಗಳು ರಾಜ್ಯದ ಆರೂವರೆ ಕೋಟಿ ಜನರಿಗೆ ತಿಳಿದಿದೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story