ಉಡುಪಿ: ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸಿ.ಟಿ.ಸ್ಕಾನ್ ಸೆಂಟರ್ ಉದ್ಘಾಟನೆ
ಉಡುಪಿ, ನ.21: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಆವರಣ ದಲ್ಲಿ ನಿರ್ಮಿಸಲಾಗಿರುವ ಸಿ.ಟಿ.ಸ್ಕಾನ್ ಸೆಂಟರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಾಮಾಲಾ ಬುಧವಾರ ಉದ್ಘಾಟಿಸಿದರು.
ಪೂನಾದ ಕ್ರಸ್ನಾ ಡಯಾಗ್ನೋಸ್ಟಿಕ್ ಪ್ರೈವೆಟ್ ಲಿಮಿಟೆಡ್ ಸಾರ್ವಜನಿಕ ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ ಸುಮಾರು 3.5ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕೇಂದ್ರದಲ್ಲಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ಹಾಗೂ ಹೊರಗಿನ ಖಾಸಗಿ ಆಸ್ಪತ್ರೆಯ ಮೂಲಕ ಬರುವ ರೋಗಿಗಳಿಗೆ 1550ರೂ. ಶುಲ್ಕ ವಿಧಿಸಿ ಸಿ.ಟಿ.ಸ್ಕಾನ್ ಮಾಡಲಾಗುತ್ತದೆ.
ಈ ಕೇಂದ್ರದ ಸಮೀಪವೇ ಇರುವ ಶೆಡ್ನ್ನು ಪುನರ್ ನಿರ್ಮಿಸಿ ಅಲ್ಲಿ ಎಂಆರ್ಐ ಸ್ಕಾನ್ ಸೇವೆಯನ್ನು ಆರಂಭಿಸಲಾಗುವುದು. ಶೀಘ್ರವೇ ಇದರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಈ ಎರಡೂ ಸೇವೆಯನ್ನು ದಿನದ 24 ಗಂಟೆಗಳ ಕಾಲವೂ ಸಾರ್ವಜನಿಕರಿಗಾಗಿ ತೆರೆದಿಡಲಾಗುವುದು ಎಂದು ಪೂನಾದ ಕ್ರಸ್ನಾ ಡಯಾಗ್ನೋಸ್ಟಿಕ್ನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯ ಜನಾರ್ದನ ತೋನ್ಸೆ, ಜಿಲ್ಲಾ ಸರ್ಜನ್ ಡಾ.ಮಧು ಸೂದನ್ ನಾಯಕ್, ಡಿಎಚ್ಒ ಡಾ.ರೋಹಿಣಿ ಮೊದಲಾದವರು ಉಪಸ್ಥಿತರಿದ್ದರು.