ಆಲೂರು: ಬಾವಿ ಕೆಲಸದ ವೇಳೆ ಮಣ್ಣು ಕುಸಿದು ಓರ್ವ ಸಾವು; ಮೂವರು ಪಾರು
ಗೋಪಾಲ ಮೊಗವೀರ
ಕುಂದಾಪುರ, ಡಿ.6: ಬಾವಿಯೊಂದರ ಕೆಲಸದ ಸಂದರ್ಭದಲ್ಲಿ ಮೇಲ್ಭಾಗದ ಮಣ್ಣು ಕುಸಿದು ಅಯ್ಯಪ್ಪ ಮಾಲಾಧಾರಿ ಒಬ್ಬರು ಮೃತಪಟ್ಟಿದ್ದು, ಮೂವರು ಪವಾಡ ಸದೃಶವಾಗಿ ಪಾರಾದ ಘಟನೆ ಆಲೂರು ಗ್ರಾಪಂ ವ್ಯಾಪ್ತಿಯ ಹಳ್ಳಿ ಎಂಬಲ್ಲಿ ಗುರುವಾರ ಸಂಭವಿಸಿದೆ.
ಆಲೂರು ಗ್ರಾಮದ ಬಸವನ ಜೆಡ್ಡು ನಿವಾಸಿ ಗೋಪಾಲ ಮೊಗವೀರ (32) ಮೃತಪಟ್ಟವರು. ಅಪಾಯದಿಂದ ಪಾರಾಗಿರುವ ಮೂವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೀಗ ಚೇತರಿಸಿಕೊಳ್ಳುತಿದ್ದಾರೆ.
ಹಳ್ಳಿಯ ಸತೀಶ್ ಹೆಗ್ಡೆ ಎಂಬವರ ತೋಟದ ಬೃಹತ್ ಬಾವಿಯಲ್ಲಿ ಹಲವು ದಿನಗಳಿಂದ 6-7 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ 8:30ರ ಸುಮಾರಿಗೆ ಬಾವಿ ಕೆಲಸಕ್ಕೆಂದು ಅದರಲ್ಲಿದ್ದ ನೀರನ್ನು ಖಾಲಿ ಮಾಡಿ ಅದನ್ನು ಮೇಲೆ ಹಾಕಲಾಗಿತ್ತು. ನೀರಿನ ತೇವಾಂಶಕ್ಕೆ ಬಾವಿಯ ಒಂದು ಬದಿಯ ಮಣ್ಣು ಕುಸಿದಿದೆ. ಈ ವೇಳೆ ಬಾವಿಯ ಒಳಗೆ ಕೆಲಸ ಮಾಡುತ್ತಿದ್ದ ಗೋಪಾಲ್, ಚಂದ್ರ ಪೂಜಾರಿ (40) ಹಾಗೂ ಶೇಖರ ಪೂಜಾರಿ (38) ಅವರ ಮೇಲೆ ಮಣ್ಣು ಕುಸಿದು ಬಿದ್ದಿದೆ.
ಇದೇ ವೇಳೆ ಬಾವಿಯ ಮೇಲ್ಭಾಗದಲ್ಲಿ ನಿಂತಿದ್ದ ಮಾಲಿಕರಾದ ಸತೀಶ್ ಹೆಗ್ಡೆ ಕೂಡ ಮಣ್ಣು ಕುಸಿದು ಕೆಳಕ್ಕೆ ಬಿದ್ದಿದ್ದಾರೆ. ಬಾಬು ದೇವಾಡಿಗ, ಗುತ್ತಿಗೆದಾರ ನಂಜಪ್ಪ ಪೂಜಾರಿ ಬಾವಿಯ ಮೇಲಿದ್ದರು. ಈ ಪೈಕಿ ಗೋಪಾಲ ಅವರು ಮಣ್ಣಿನಡಿ ಸಂಪೂರ್ಣ ಹುಗಿದುಹೋಗಿದ್ದರಿಂದ ಅವರನ್ನು ಕ್ಷಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.
ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೆಸರು, ಮಣ್ಣು-ಕಲ್ಲುಗಳ ನಡುವೆ ಗೋಪಾಲ ಸಿಲುಕಿ ಕೊಂಡಿದ್ದು, ಸುಮಾರು 3 ಗಂಟೆಗೂ ಹೆಚ್ಚು ಕಾಲ 1 ಹಿಟಾಚಿ, 2 ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಮೃದೇಹವನ್ನು ಮೇಲೆತ್ತಲಾಯಿತು.
ಘಟನೆ ಸುದ್ದಿ ತಿಳಿಯುತಿದ್ದಂತೆಯೇ ಆಸುಪಾಸಿನ ಊರುಗಳ ನೂರಾರು ಮಂದಿ ಘಟನೆ ಸಂವಿಸಿದ ಸ್ಥಳದಲ್ಲಿ ಜಮಾಯಿಸಿದ್ದರು. ಗಂಗೊಳ್ಳಿ ಎಸ್ಐ ವಾಸಪ್ಪ ನಾಯ್ಕಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರವಷ್ಟೇ ಮಾಲೆ ಧರಿಸಿದ್ದರು
ಗೋಪಾಲ ಅವರು ಡಿ.5ರಂದು ಅಯ್ಯಪ್ಪ ಮಾಲೆ ಧರಿಸಿದ್ದರು. ಮಾಲೆ ಧರಿಸುವುದು ಅವರ ಹಲವು ವರ್ಷಗಳ ಬಯಕೆಯಾಗಿತ್ತು. ಅವರು ಮಾಲೆ ಧರಿಸುತ್ತಿರುವುದು ಇದೇ ಮೊದಲ ಸಲವಾಗಿದೆ ಎಂದು ಅರ ಸಂಬಂಧಿಕರು ತಿಳಿಸಿದರು.
ಆಲೂರಿನ ಬಸವನಜೆಡ್ಡುವಿನ ದಿ. ರಾಮ ಮೊಗವೀರ ಹಾಗೂ ಮುತ್ತು ದಂಪತಿಯ 6 ಮಂದಿ ಮಕ್ಕಳಲ್ಲಿ (ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು) ಓರ್ವರಾಗಿದ್ದ ಗೋಪಾಲ ಅವಿವಾಹಿತರಾಗಿದ್ದು, 4-5 ವರ್ಷ ಗಳಿಂದ ಊರು, ಆಸುಪಾಸುಗಳಲ್ಲಿ ಬಾವಿ ಕೆಲಸ ಮಾಡುತಿದ್ದರು. ಹಲವು ವರ್ಷಗಳ ಹಿಂದೆ ಮನೆಯೊಂದನ್ನು ಕಟ್ಟಲು ಪ್ರಾರಂಭಿಸಿದ್ದು, ಇನ್ನೂ ಪೂರ್ಣ ಗೊಂಡಿಲ್ಲ. ಬಡ ಕುಟುಂಬದ ಈ ಮನೆಯಲ್ಲಿ ಎಲ್ಲರೂ ಕೂಲಿ ಕಾರ್ಮಿಕ ರಾಗಿದ್ದಾರೆ.