ಮಂಗಳೂರು: ಖಾಸಗಿ ಬಸ್ ಹರಿದು ಬೈಕ್ ಸವಾರ ಮೃತ್ಯು
ಮಂಗಳೂರು, ಡಿ.10: ಕಾರ್ಕಳದಿಂದ ಬರುತ್ತಿದ್ದ ಖಾಸಗಿ ಬಸ್ವೊಂದು ಬೈಕ್ಗೆ ಢಿಕ್ಕಿಯಾದ ಪರಿಣಾಮ ಬಸ್ ಟೈರ್ನಡಿಗೆ ಸಿಲುಕಿ ದ್ವಿಚಕ್ರ ಸವಾರ ಮೃತಪಟ್ಟ ಘಟನೆ ನಗರದ ಹೊರವಲಯ ಬೈತುರ್ಲಿ ಜಂಕ್ಷನ್ ಬಳಿ ಸೋಮವಾರ ಸಂಜೆ ನಡೆದಿದೆ.
ಉಳಾಯಿಬೆಟ್ಟು ಕಾಂತರಬೆಟ್ಟು ನಿವಾಸಿ ತಿಮ್ಮಯ್ಯ (42) ಮೃತರು.
ಇವರು ನಗರದಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದು, ಸೋಮವಾರ ಸಂಜೆ ಕೆಲಸ ಮುಗಿಸಿ ತಿರುವೈಲು ಸಮೀಪವಿರುವ ಬಾಡಿಗೆ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಬೈತುರ್ಲಿ ಜಂಕ್ಷನ್ನಲ್ಲಿ ಬಸ್ವೊಂದನ್ನು ಓವರ್ಟೇಕ್ ಮಾಡಿ ಕುಡುಪುವಿನತ್ತ ಹೋಗುತ್ತಿದ್ದಾಗ ಕಾರ್ಕಳದಿಂದ ಬರುತ್ತಿದ್ದ ‘ಸುನೀಲ್’ ಹೆಸರಿನ ಖಾಸಗಿ ಬಸ್ ಢಿಕ್ಕಿಯಾಗಿದೆ. ಇದರಿಂದ ಬಸ್ ಟೈರ್ಗೆ ಸಿಲುಕಿದ ತಿಮ್ಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ವ್ಯಕ್ತಿಯನ್ನು ಬಸ್ ಸುಮಾರು 50 ಮೀಟರ್ವರೆಗೆ ಎಳೆದುಕೊಂಡು ಹೋಗಿದೆ ಎಂದು ತಿಳಿದುಬಂದಿದೆ.
ಪತ್ನಿಗೂ ಅನಾರೋಗ್ಯ: ತಿಮ್ಮಯ್ಯ ಅವರ ಪತ್ನಿಯೂ ಕಳೆದ ಹಲವು ಸಮಯಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇವರದು ತೀರಾ ಬಡ ಕುಟುಂಬದವರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.
ಈ ಕುರಿತು ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.