ಎಂಆರ್ಪಿಎಲ್ 4ನೇ ಹಂತದ ಯೋಜನೆಗೆ ಭೂಸ್ವಾಧೀನ: ಹೊಸ ಕಾಯ್ದೆಯಂತೆ ದರ ನಿಗದಿಗೆ ಒತ್ತಾಯಿಸಿ ಸಿಎಂಗೆ ಮನವಿ
ಮಂಗಳೂರು, ಡಿ.12: ಎಂಆರ್ಪಿಎಲ್ 4ನೇ ಹಂತದ ಯೋಜನೆಗೆ ಭೂಸ್ವಾಧೀನಗೊಳ್ಳುವ ಜಮೀನಿಗೆ 2013ರ ಹೊಸ ಕಾಯ್ದೆಯಂತೆ ಮಾರುಕಟ್ಟೆ ದರವನ್ನು ಪರಿಗಣಿಸಿ ಭೂದರ ನಿಗದಿಗೊಳಿಸುವ ಬಗ್ಗೆ ಸಂಯಕ್ತ ನಾಗರಿಕ ಹಿತರಕ್ಷಣಾ ಸಮಿತಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಬೆಳಗಾವಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಭೂಸ್ವಾದೀನ ಕಾಯ್ದೆ 2013ರ ಕಾಲಂ 26ರ ತಕರಾರಿನಲ್ಲಿ ನಿಗದಿಪಡಿಸಲು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ ಅವರು, ಭೂಮಿಯನ್ನು ನೀಡಿರುವ ರೈತರಿಗೆ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೈಗಾರಿಕೆಗಳಿಗೆ ಎಚ್ಚರಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
4ನೇ ಹಂತದ ವಿಸ್ತರಣೆಗೆ ಸುಮಾರು 1,050 ಎಕರೆ ಭೂಮಿಯನ್ನು ವಶಪಡಿಸುವಂತೆ ತೀರ್ಮಾನಿಸಲಾಗಿದೆ. 70 ಎಕರೆ ಅಧಿಕ ಖಾಸಗಿ ಭೂಮಿಯನ್ನು ವಶಪಡಿಸುವಂತೆ 2013ರ ಒಪ್ಪಂದದ ಕಾಯ್ದೆಯಂತೆ ನೀಡಬಾರದು. ಹಿಂದಿನ ಪರಿಹಾರ ಕಾಯ್ದೆ ಒಪ್ಪಂದದ ಮೂಲಕ ಭೂಮಿಯನ್ನು ಸ್ವಾಧೀನ ಪಡಿಸಿ ಕೊಳ್ಳಲು ತೀರ್ಮಾನ ಕೈಗೊಳ್ಳುವಂತೆ ವಿನಂತಿಸಲಾಯಿತು. ಮಾರುಕಟ್ಟೆ ದರಕ್ಕಿಂತ 4ಪಟ್ಟು ದರದಿಂದ ಕನಿಷ್ಠ 3ಪಟ್ಟು ದರ ನಿಗದಿ ಮಾಡಬೇಕೆಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಯುಕ್ತ ನಾಗರಿಕಾ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರೋನಾಲ್ಡ್ ಫೆರ್ನಾಂಡಿಸ್, ಕಾರ್ಯದರ್ಶಿ ದೀಪಕ್ ಪೆರ್ಮುದೆ ಮುಂತಾದವರು ಜೊತೆಗಿದ್ದರು.