ಪಡುಬಿದ್ರೆ : ನವಯುಗ ಕಂಪೆನಿ ವಿರುದ್ಧ ಅನಿರ್ಧಿಷ್ಟಾವಧಿ ಪ್ರತಿಭಟನೆ
ಪಡುಬಿದ್ರೆ, ಜ. 7 : ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಹಾಗೂ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದಾರೆಂದು ಆರೋಪಿಸಿ ನವಯುಗ ಕಂಪೆನಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪಡುಬಿದ್ರೆಯ ಟೆಂಪೋ ನಿಲ್ದಾಣದ ಬಳಿ ಅನಿರ್ಧಿಷ್ಠಾವಧಿ ಪ್ರತಿಭಟನೆ ಸೋಮವಾರ ಆರಂಭಗೊಂಡಿದೆ.
ಪಡುಬಿದ್ರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಎಲ್ಲಾ ಪಂಚಾಯತ್ಗಳ ವಾಹನಗಳಿಗೆ ಉಚಿತ ಸಂಚಾರಕ್ಕೆ ತಕ್ಷಣದಿಂದಲೇ ಅನುವು ಮಾಡಿಕೊಡಬೇಕು. ಉಡುಪಿ ಜಿಲ್ಲೆ ನೋಂದಾವಣೆ ವಾಹನಗಳಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಒಂದು ತಿಂಗಳೊಳಗೆ ಉಚಿತ ಸಂಚಾರವನ್ನು ಜಾರಿಗೆ ಮಾಡಬೇಕು. ಪಡುಬಿದ್ರೆ ಕಲ್ಸಂಕದಿಂದ ಮುಲ್ಕಿಯವರೆಗೆ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ಪಡುಬಿದ್ರೆಯಲ್ಲಿ ಕೂಡಲೇ ಬಸ್ಸು ನಿಲ್ದಾಣ ನಿರ್ಮಿಸಬೇಕು. ಟೆಂಪೋ ನಿಲ್ದಾಣದ ಬಳಿ ಪ್ರತ್ಯೇಕ ಬಸ್ಸು ನಿಲ್ದಾಣ ನಿರ್ಮಿಸಿ ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ ಹೆಬ್ರಿ, ದಸಂಸ ಮುಖಂಡ ಲೋಕೇಶ್ ಕಂಚಿನಡ್ಕ, ಗ್ರಾಮ ಪಂಚಾಯತ್ ಸದಸ್ಯ ಹಸನ್ ಬಾವ, ಕರವೇ ತಾಲೂಕು ಅಧ್ಯಕ್ಷ ನಿಝಾಮ್ ಅಹಮದ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಆಸೀಫ್ ಆಪದ್ಬಾಂಧವ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉಮೇಶ್ ಜೋಗಿ, ಪಡುಬಿದ್ರೆ ಘಟಕದ ಅಧ್ಯಕ್ಷ ಜುನೈದ್, ಉಡುಪಿ ತಾಲೂಕು ಅಧ್ಯಕ್ಷ ಸುಧೀರ್ ಪೂಜಾರಿ, ಫಿರೋಝ್ ಕಂಚಿನಡ್ಕ, ಹೆಜಮಾಡಿ ಘಟಕದ ಅಧ್ಯಕ್ಷ ಅಬ್ದುಲ್ ಹಮೀದ್, ಸುಲೈಮಾನ್ ಕಂಚಿನಡ್ಕ, ದಸಂಸ ಮುಖಂಡ ಲೋಕೇಶ್ ಕಂಚಿನಡ್ಕ ಹಾಗು ಇತರರು ಉಪಸ್ಥಿತರಿದ್ದರು.