ವಿಜಯ ಬ್ಯಾಂಕ್ ಉಳಿಸಿ ಹೋರಾಟ ಸಮಿತಿ ರಚನೆ
ಮಂಗಳೂರು,ಜ.10: ನಗರದ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿಂದು ವಿಜಯ ಬ್ಯಾಂಕ್ ವಿಲೀನದ ವಿರುದ್ಧ ವಿವಿಧ ಸಂಘಟನೆಗಳು ಸಮಾಲೋಚನಾ ಸಭೆ ನಡೆಸಿದ ಬಳಿಕ ವಿಜಯ ಬ್ಯಾಂಕ್ ಉಳಿಸಿ ಹೋರಾಟ ಸಮಿತಿ ರಚಿಸಲು ತೀರ್ಮಾನಿಸ ಲಾಯಿತು.
ಇಂದು ನಡೆದ ಸಮಾಲೋಚನಾ ಸಭೆಯಲ್ಲಿ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿಯವರನ್ನು ಅಧ್ಯಕ್ಷರನ್ನಾಗಿ ಹಾಗೂ ಹರಿಕೃಷ್ಣ ಪುನರೂರವರನ್ನು ಗೌರವಾಧ್ಯಕ್ಷರಾಗಿ ಹಾಗೂ ಇತರ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಿ ಹೋರಾಟ ಸಮಿತಿ ರಚಿಸಿ ಮುಂದಿನ ಹಂತದಲ್ಲಿ ಹೋರಾಟದ ರೂಪು ರೇಷೆಗಳ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿಜಯ ಬ್ಯಾಂಕ್ನ್ನು ನಷ್ಟದಲ್ಲಿ ಹೊಂದಿರುವ ಬ್ಯಾಂಕ್ನೊಂದಿಗೆ ವಿಲೀನಮಾಡಬೇಕೆಂಬ ತೀರ್ಮಾನವೂ ಸಾಕಷ್ಟು ಲೋಪ ದೋಷಗಳಿಂದ ಕೂಡಿದೆ ಈ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ದಿನೇಶ್ ಹೆಗ್ಡೆ ಉಳೆಪ್ಪಾಡಿ ಸಮಾಲೋಚನಾ ಸಭೆಯಲ್ಲಿಂದು ತಿಳಿಸಿದ್ದಾರೆ.
ಬ್ಯಾಂಕ್ಗಳ ರಾಷ್ಟ್ರೀಕರಣ ವಾಗುವ ಮೊದಲು ಅದು ದೇಶದ ಕೇವಲ ಶೇ 30ರಷ್ಟು ಜನರನ್ನು ಮಾತ್ರ ತಲುಪಿತ್ತು. ರಾಷ್ಟ್ರೀಕರಣವಾದ ಬಳಿಕ ದೇಶದ ಬಹುತೇಕ ಗ್ರಾಮಾಂತರ ಪ್ರದೇಶದಲ್ಲೂ ಸೇವೆ ನೀಡಿ ಜನಸಾಮಾನ್ಯರ ಬಳಿ ತಲುಪಿತ್ತು. ಇಂತಹ ಬ್ಯಾಂಕನ್ನು ಮತ್ತೆ ವಿಲೀನಗೊಳಿಸುವ ಮೂಲಕ ಜನರಿಂದ ದೂರಮಾಡುವ ಹುನ್ನಾರ ನಡೆಯುತ್ತಿದೆ. ಎಸ್ಬಿಐ ಬ್ಯಾಂಕ್ ವಿಲೀನವಾದ ಬಳಿಕ ಸುಮಾರು 3000 ಶಾಖೆಗಳನ್ನು ಮುಚ್ಚಲಾಯಿತು. ಇದರಿಂದ ಸಾಕಷ್ಟು ಗ್ರಾಹಕರು ಪರದಾಡುವಂತಾಯಿತು. ಇದೆ ಸ್ಥಿತಿ ವಿಜಯ ಬ್ಯಾಂಕ್ನ ಗ್ರಾಹಕರಿಗೆ ಉಂಟಾಗುವ ಭೀತಿ ಇದೆ ಎಂದು ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಮುಖಂಡ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಸಮಾಲೋಚನಾ ಸಭೆಯಲ್ಲಿ ವಿಜಯ ಬ್ಯಾಂಕ್ ನೌಕರರ ಸಂಘಟನೆಯ ಮುಖಂಡ ಕರುಣಾಕರ ಶೆಟ್ಟಿ, ಮುನೀರ್ ಕಾಟಿಪಳ್ಳ, ಕೊಲ್ಲಾಡಿ ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.