ಶಾಸಕರ ಭವನದಲ್ಲೇ ಭ್ರಷ್ಟ ಶಾಸಕನನ್ನು ಬಂಧಿಸಿದ ಮೊದಲ ಅಧಿಕಾರಿ ಮಧುಕರ್ ಶೆಟ್ಟಿ: ಅಬ್ದುಲ್ ಅಹದ್ ಪುತ್ತಿಗೆ
ಉಡುಪಿ, ಜ.11: ಬಳ್ಳಾರಿಯ ಅಕ್ರಮ ಗಣಿಗಾರಿಕೆಯಲ್ಲಿ ಗುರುತಿಸಿ ಕೊಂಡವರಿಗೆ ಶಿಕ್ಷೆ ಕೊಡುವುದರಲ್ಲಿ ಐಪಿಎಸ್ ಅಧಿಕಾರಿ ದಿವಂಗತ ಮಧುಕರ್ ಅವರ ಪಾತ್ರ ಮಹತ್ತರವಾದುದು. ಮೊದಲ ಬಾರಿಗೆ ಶಾಸಕ ಭವನಕ್ಕೆ ನುಗ್ಗಿ ಓರ್ವ ಭ್ರಷ್ಟ ಶಾಸಕನನ್ನು ಬಂಧಿಸುವಲ್ಲಿ ಅವರು ಯಶಸ್ವಿಯಾಗಿದ್ದರು ಎಂದು ಬೆಂಗಳೂರು ವೈಟ್ಪೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಪುತ್ತಿಗೆ ಹೇಳಿದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಶುಕ್ರವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ಐಪಿಎಸ್ ಅಧಿಕಾರಿ ದಿವಂಗತ ಮಧುಕರ್ ಶೆಟ್ಟಿಗೆ ನುಡಿ ಗೌರವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಮಧುಕರ್ ಶೆಟ್ಟಿ ಜೀವನವೇ ಒಂದು ಸಂದೇಶವಾಗಿದೆ. ಅವರ ಆ ಸಂದೇಶಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲೆ ಇದೆ. ದಮನಿತರ, ಸತ್ಯ, ನ್ಯಾಯದ ಪರ, ಭ್ರಷ್ಟಾಚಾರದ ವಿರುದ್ಧವಾಗಿ ಕೆಲಸ ಮಾಡುವ ಮೂಲಕ ಅವರಿಗೆ ನಮ್ಮ ಗೌರವವನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಮಧುಕರ್ ಶೆಟ್ಟಿಗೆ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಸ್ಪಷ್ಟ ಕಲ್ಪನೆ ಇತ್ತು. ಗುಮಾಸ್ತ, ಕಾನ್ಸ್ಸ್ಟೇಬಲ್ ಗಳನ್ನು ಹಿಡಿಯುವುದರಿಂದ ಭ್ರಷ್ಟಚಾರ ಹತೋಟಿಗೆ ತರಲು ಸಾಧ್ಯವಿಲ್ಲ, ಅದರ ಮೂಲವನ್ನು ಹುಡುಕಿ ಅದನ್ನು ನಿಯಂತ್ರಣ ಮಾಡಬೇಕೆಂಬುವುದನ್ನು ಅರಿತಿದ್ದರು. ಅವರಿಗೆ ಇನ್ನು ಎರಡು ವರ್ಷ ಅವಕಾಶ ಮತ್ತು ಬೆಂಬಲ ನೀಡುತ್ತಿದ್ದರೆ ಭ್ರಷ್ಟಾಚಾರವನ್ನು ಮೂಲದಿಂದಲೇ ನಿಯಂತ್ರಣ ಮಾಡುತ್ತಿದ್ದರು ಎಂದರು.