ಅರ್ಜಿಗಳ ಕುರಿತು ಸ್ಪಷ್ಟ ಮಾಹಿತಿ ನೀಡಿ: ರಾಜ್ಯ ಮಾಹಿತಿ ಅಯುಕ್ತ ರಮೇಶ್ ಸೂಚನೆ
ಉಡುಪಿ, ಜ.10: ಮಾಹಿತಿ ಹಕ್ಕು ಅಧಿ ನಿಯಮದಡಿ ಸ್ವೀಕರಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ, ಕಚೇರಿಯಲ್ಲಿ ಸ್ಪಷ್ಟ ಮಾಹಿತಿ ನೀಡಬೇಕು. ಅಸ್ಪಷ್ಟ ಮಾಹಿತಿ ನೀಡಿ ಅರ್ಜಿದಾರರು ಮೇಲ್ಮನವಿ ಸಲ್ಲಿಸುವಂತೆ ಮಾಡಬೇಡಿ ಎಂದು ಎಲ್ಲಾ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತ ಎನ್.ಪಿ.ರಮೇಶ್ ಸೂಚಿಸಿದ್ದಾರೆ.
ಮಾಹಿತಿ ಹಕ್ಕು ನಿಯಮದಡಿ ಅರ್ಜಿ ಸಲ್ಲಿಸುವವರಿಗೆ, ತಮ್ಮ ಕಚೇರಿಯಲ್ಲಿ ಲಭ್ಯವಿರುವ ಸ್ಪಷ್ಟ ಮಾಹಿತಿಯನ್ನು ನೀಡಿ, ಒಂದು ವೇಳೆ ನಿಮ್ಮಲ್ಲಿ ಕೋರಿರುವ ಮಾಹಿತಿ ಇಲ್ಲವಾದಲ್ಲಿ ನಿಗದಿತ ಅವಧಿಯೊಳಗೆ ಹಿಂಬರಹ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿ. ಅರ್ಜಿದಾರರಿಗೆ ಅನಾವಶ್ಯಕವಾಗಿ ಪದೇ ಪದೇ ಕಚೇರಿಗೆ ಬರುವಂತೆ ಮಾಡಬೇಡಿ, ಅರ್ಜಿಯನ್ನು ತಿರಸ್ಕರಿಸುವುದಿದ್ದರೆ ಸೂಕ್ತ ಕಾರಣ ನೀಡಿ. ಸಂಬಂದಪಟ್ಟ ಸೆಕ್ಷನ್ಗಳನ್ನು ಉಲ್ಲೇಖಿಸಿ ತಿರಸ್ಕರಿಸಿ. ಅರ್ಜಿದಾರರಿಗೆ ಎಲ್ಲಾ ಮಾಹಿತಿಯನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಸೂಕ್ತ ಸ್ವೀಕೃತಿ ಪತ್ರದೊಂದಿಗೆ ರವಾನಿಸಬೇಕು ಎಂದು ಎನ್.ಪಿ.ರಮೇಶ್ ಹೇಳಿದರು.
ಮಾಹಿತಿ ಆಯೋಗದಲ್ಲಿ ದಾಖಲಾಗಿರುವ ಉಡುಪಿ ಜಿಲ್ಲೆಗೆ ಸಂಬಂದಪಟ್ಟ 56 ಪ್ರಕರಣಗಳಿಗೆ ಸಂಬಂದಪಟ್ಟಂತೆ ಅರ್ಜಿದಾರರು ಮತ್ತು ಅಧಿಕಾರಿಗಳ ವಿಚಾರಣೆಯನ್ನು ರಾಜ್ಯ ಮಾಹಿತಿ ಆಯುಕ್ತರು ನಡೆಸಿದರು.
ಮಾಹಿತಿ ಆಯೋಗದಲ್ಲಿ ದಾಖಲಾಗಿರುವ ಉಡುಪಿ ಜಿಲ್ಲೆಗೆ ಸಂಬಂದಪಟ್ಟ 56 ಪ್ರಕರಣಗಳಿಗೆ ಸಂಬಂದಪಟ್ಟಂತೆ ಅರ್ಜಿದಾರರು ಮತ್ತು ಅಧಿಕಾರಿಗಳ ವಿಚಾರಣೆಯನ್ನು ರಾಜ್ಯ ಮಾಹಿತಿ ಆಯುಕ್ತರು ನಡೆಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.