ಫಲ್ಗುಣಿ ತಟದಲ್ಲಿ ಪ್ರಥಮ ‘ಮಂಗಳೂರು ನದಿ ಉತ್ಸವ’ಕ್ಕೆ ಚಾಲನೆ
ಮಂಗಳೂರು, ಜ.11: ದ.ಕ. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಫಲ್ಗುಣಿ ನದಿ ತಟದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ಮಂಗಳೂರು ನದಿ ಉತ್ಸವ’ಕ್ಕೆ ಕೂಳೂರು ಸೇತುವೆ ಜಟ್ಟಿ ಬಳಿಯಲ್ಲಿ ಇಂದು ಬೆಳಗ್ಗೆ ಚಾಲನೆ ದೊರೆಯಿತು.
ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನದಿ ಉತ್ಸವಕ್ಕೆ ಚಾಲನೆ ನೀಡಿದರು. ದೋಣಿಯಲ್ಲಿ ಸಂಗೀತದೊಂದಿಗೆ ಬಂಗ್ರ ಕೂಳೂರು ಜಟ್ಟಿವರೆಗೆ ಅತಿಥಿ ಗಣ್ಯರು ಆಗಮಿಸಿದರು. ಅಲ್ಲಿ ಪಂಚವಾದ್ಯ ನಗಾರಿ, ವಾದ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಈ ಸಂದರ್ಭ ಮನಪಾ ಮೇಯರ್ ಭಾಸ್ಕರ್ ಕೆ., ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ನದಿ ಉತ್ಸವಕ್ಕೆ ಸಾಗುವ ದಾರಿ....
ನದಿ ಉತ್ಸವದ ಪ್ರಮುಖ ಸ್ಥಳವಾದ ಬಂಗ್ರ ಕೂಳೂರು ಬಳಿಗೆ ದೋಣಿ ಮೂಲಕ ಸಾಗಬೇಕಾದರೆ ಸುಲ್ತಾನ್ ಬತ್ತೇರಿ ಅಥವಾ ಕೂಳೂರು ಸೇತುವೆ ಬಳಿಯಿಂದ ಆಗಮಿಸಬೇಕು. ಇಲ್ಲವಾದಲ್ಲಿ ಕೂಳೂರು ಬಸ್ಸು ನಿಲ್ದಾಣ ಸಮೀಪದ ರಸ್ತೆ ಮಾರ್ಗವಾಗಿ ನಡೆದುಕೊಂಡು ನದಿ ಸೌಂದರ್ಯವನ್ನು ಆಸ್ವಾದಿಸುತ್ತಾ ಸುಮಾರು 2 ಕಿ.ಮೀ. ದೂರವನ್ನು ಕ್ರಮಿಸಬಹುದಾಗಿದೆ. ದೋಣಿ ಮೂಲಕ ಸಾಗಲು ತಲಾ 50 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ