ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ಮೋದಿಯ ಚುನಾವಣಾ ಗಿಮಿಕ್: ಬಿನೊಯ್ ವಿಶ್ವಂ
ಮಂಗಳೂರು, ಜ.12: ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡುತ್ತೇವೆ ಎನ್ನುವುದು ಮೋದಿಯ ಚುನಾವಣಾ ಗಿಮಿಕ್ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಸಭಾ ಸದಸ್ಯ ಬಿನೊಯ್ ವಿಶ್ವಂ ಹೇಳಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಪ್ರಯತ್ನ ಈ ಹಿಂದೆಯೂ ನಡೆದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಸಮ್ಮತಿಸಲಿಲ್ಲ ಅಲ್ಲದೆ ಇಂತಹ ಪ್ರಯತ್ನ ರಾಜಸ್ಥಾನ, ಆಂಧ್ರ ಪ್ರದೇಶ, ತಮಿಳುನಾಡು ಸರಕಾರಗಳು ಮಾಡಿದ್ದು, ಅದೇನು ಯಶಸ್ವಿಯಾಗಲಿಲ್ಲ. ಮಂಡಲ್ ವರದಿಯನ್ನು ವಿರೋಧಿಸಿರುವ ಬಿಜೆಪಿ ಮುಂಬರುವ ಚುನಾವಣೆಯ ಭೀತಿಯಿಂದ ಸಂವಿಧಾನದ ನಿಯಮಗಳನ್ನು ಪರಿಗಣಿಸದೆ ಈ ರೀತಿಯ ನೀತಿಗಳನ್ನು ರೂಪಿಸಲು ಹೊರಟಿದೆ ಎಂದು ಟೀಕಿಸಿದ್ದಾರೆ.
ಸಂವಿಧಾನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಅವಕಾಶ ಕಲ್ಪಿಸಲಾಗಿದೆಯೇ ಹೊರತು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಶಕ್ತರಾಗಿರುವವರಿಗೆ ಮೀಸಲಾತಿ ನೀಡುವುದಕ್ಕೆ ವಿರೋಧವಿದೆ. ಮೋದಿ ಪ್ರಸ್ತಾಪ ಮಾಡಿರುವ ಶೇ.10ರ ಮಿಸಲಾತಿಯಲ್ಲಿ ಮೇಲ್ವರ್ಗದ ವಾರ್ಷಿಕ 8 ಲಕ್ಷ ರೂ. ವೇತನ ಅಂದರೆ ತಿಂಗಳಿಗೆ 66,600 ರೂ. ಆದಾಯ ಹೊಂದಿರುವವರು ಒಳಪಡುತ್ತಾರೆ. ಅದಲ್ಲದೆ ಈ ಹಿಂದೆ ಸುಪ್ರೀಂ ಕೋರ್ಟ್ ಮೀಸಲಾತಿಯ ಪ್ರಮಾಣ ಶೇ.50ನ್ನು ಮೀರಬಾರದು ಎನ್ನುವ ತೀರ್ಪು ನೀಡಿರುವುದನ್ನು ಗಮನಿಸಿದರೆ, ಈ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಕೂಡಾ ಒಪ್ಪಲು ಸಾಧ್ಯವಿಲ್ಲ ಎಂದು ಬಿನೊಯ್ ವಿಶ್ವಂ ಅಭಿಪ್ರಾಯಿಸಿದರು.
*ಪಂಚರಾಜ್ಯದ ಚುನಾವಣೆಯ ಹಿನ್ನಡೆ ಪ್ರಸ್ತಾಪಿಸದ ಅಮಿತ್ ಶಾ
ಪಂಚರಾಜ್ಯದ ಚುನವಣೆಯ ಬಳಿಕ ಜ.11ರಂದು ದಿಲ್ಲಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಅಮಿತ್ಶಾ ಚುನಾವಣೆಯಲ್ಲಿ ಬಿಜೆಪಿಗಾದ ಹಿನ್ನಡೆಯ ಪ್ರಸ್ತಾಪ ಮಾಡಿಲ್ಲ. ಇದನ್ನು ಗಮನಿಸುವಾಗ ಬಿಜೆಪಿ ಸೋಲಿನ ಭೀತಿಯಲ್ಲಿರುವುದು ಮನವರಿಕೆಯಾಗುತ್ತಿದೆ. ಬದಲಾಗಿ 2019ನೇ ಚುನಾವಣೆಯನ್ನು ಅಮಿತ್ ಶಾ ಮೂರನೇ ಪಾಣಿಪತ್ ಯುದ್ಧಕ್ಕೆ ಹೋಲಿಸುತ್ತಿದ್ದಾರೆ. ಈ ರೀತಿ ಜನರನ್ನು ದಿಕ್ಕು ತಪ್ಪಿಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದಲ್ಲಿ ಕಾರ್ಮಿಕ ವಿರೋಧಿ, ಫ್ಯಾಶಿಸ್ಟ್ ಧೋರಣೆಯ ಆಡಳಿತ ನಡೆಸುತ್ತಿದೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಸಂಸ್ಥೆಗಳಾದ ಸಂಸತ್, ನ್ಯಾಯಾಂಗ, ರಿಸರ್ವ್ ಬ್ಯಾಂಕ್, ವಿಶ್ವವಿದ್ಯಾನಿಲಯ ಇತ್ತೀಚೆಗೆ ಸಿಬಿಐಯ ಮೇಲೂ ಪ್ರಭಾವ ಬೀರುವ ಮೂಲಕ ಹತೋಟಿಯಲ್ಲಿಡಲು ಪ್ರಯತ್ನಿಸುತ್ತಿದೆ. ಇದು ಅಪಾಯಕಾರಿ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಿರುವ ಜಾತ್ಯತೀತ ನಿಲುವಿನ ಸಮಾನ ಮನಸ್ಕಪಕ್ಷಗಳು ಒಂದುಗೂಡಬೇಕಾಗಿದೆ ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಫ್ಯಾಶಿಸ್ಟ್ ಮೈತ್ರಿ ಕೂಟವನ್ನು ಸೋಲಿಸಬೇಕಾಗಿದೆ ಎಂದು ಬಿನೊಯ್ ವಿಶ್ವಂ ಹೇಳಿದ್ದಾರೆ.
* ದೇವರ ಹೆಸರಿನಲ್ಲಿ ಬಿಜೆಪಿ ರಾಜಕೀಯ:
ಬಿಜೆಪಿ-ಸಂಘ ಪರಿವಾರ ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಅದಕ್ಕಾಗಿ ಉತ್ತರದಲ್ಲಿ, ಶ್ರೀರಾಮ ದಕ್ಷಿಣದಲ್ಲಿ ಅಯ್ಯಪ್ಪ ಸ್ವಾಮಿಯ ಹೆಸರನ್ನು ಬಳಸುತ್ತಿದೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿ 400 ವರ್ಷಗಳಿಂದ ಮಹಿಳೆಯರಿಗೆ ಪ್ರವೇಶವಿಲ್ಲದ ಶನೀಶ್ವರ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಲು ಮುಂಬಯಿ ಹೈಕೋರ್ಟ್ ಆದೇಶಿಸಿದಾಗ ಬಿಜೆಪಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿತ್ತು. ಆದರೆ ಕೇರಳದಲ್ಲಿ ಅಯ್ಯುಪ್ಪ ಸ್ವಾಮಿಯ ದೇವಾಲಯಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸುತ್ತಿದೆ. ಸಂಘ ಪರಿವಾರ ಮಹಿಳೆಯರಿಗೆ ಸಮಾನ ಗೌರವ ನೀಡಬೇಕು ಎಂದು ಹೇಳುತ್ತಾ ಇನ್ನೊಂದು ಕಡೆ ಮಹಿಳಾ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಇದು ಬಿಜೆಪಿ, ಸಂಘ ಪರಿವಾರ ಬಿಜೆಪಿಯ ದ್ವಿಮುಖ ನೀತಿಗೆ ನಿದರ್ಶನ ಎಂದು ಬಿನೋಯ್ ತಿಳಿಸಿದರು.
ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಆಗಿರುವ ಹಿನ್ನಡೆ ಆಶಾದಾಯಕ ಬೆಳವಣಿಗೆ ಎಂದು ಬಿನೊಯ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್, ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ ಮುಖಂಡರಾದ ಎಚ್.ವಿ.ರಾವ್, ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದರು.