ಮಕ್ಕಳಲ್ಲಿ ಸಮಾನತೆಯ ಮನೋಧರ್ಮ ಬೆಳೆಸುವುದು ಇಂದಿನ ಅಗತ್ಯ: ಏರ್ಯ
ಉಡುಪಿ, ಜ.13: ಎಲ್ಲ ಧರ್ಮಗಳಲ್ಲಿರುವ ಒಳ್ಳೆಯ ವಿಚಾರಗಳನ್ನು ಶಾಲಾ ಪಠ್ಯಗಳಲ್ಲಿ ಅಳವಡಿಸಬೇಕು. ಇದರಿಂದ ಮಕ್ಕಳಲ್ಲಿ ಸಮಾನತೆಯ ಮನೋ ಧರ್ಮ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹಿರಿಯ ವಿದ್ವಾಂಸ ಏಯರ್ ಲಕ್ಷ್ಮೀನಾರಾಯಣ ಆಳ್ವ ಹೇಳಿದ್ದಾರೆ.
ಉಡುಪಿ ರಂಗಭೂಮಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಮುಖಾಮುಖಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇಂದು ಪೋಷಕರು ಮಕ್ಕಳನ್ನು ಬೆಳೆಸುವ ರೀತಿ ಬದಲಾಗಿದೆ. ತಂದೆ ತಾಯಿ ಗಳು ಕೇವಲ ಅಂಕ ಗಳಿಸುವ ಗುರಿ ಇಟ್ಟುಕೊಂಡೆ ಮಕ್ಕಳಿಗೆ ಶಿಕ್ಷಣ ನೀಡು ತ್ತಿದ್ದಾರೆ. ಇದರಿಂದ ಮಕ್ಕಳು ಸಂಸ್ಕಾರದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಹೃದಯ ವೈಶಾಲ್ಯತೆಯಿಂದ ಮಾತ್ರ ಹೊಂದಾಣಿಕೆ ಸಾಧ್ಯವಾಗುತ್ತದೆ. ಆದರೆ ಸಮಾಜದಲ್ಲಿನ ಕೂಡು ಕುಟುಂಬಗಳು ನಾಶವಾಗಿ ಹೊಂದಾಣಿಕೆ ಹಾಗೂ ಹೃದಯ ವೈಶಾಲ್ಯತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮ ನಮ್ಮಲ್ಲಿ ವಿವಾಹ ವಿಚ್ಛೇಧನೆಗಳು ಹೆಚ್ಚಾಗುತ್ತಿವೆ. ಹೆಣ್ಣು ಮತ್ತು ಗಂಡ ಎರಡೂ ಕಡೆ ಯಿಂದಲೂ ಸಮಸ್ಯೆಯಾಗಿ ಈ ರೀತಿ ಆಗುತ್ತದೆ ಎಂದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೃಷಿಯ ಜೊತೆಗೆ ಬೀಡಿ ಉದ್ಯಮ ಬೆಳೆದು ಬಂದು. ಇದರಿಂದ ಹಳ್ಳಿಯ ಬಹಳಷ್ಟು ಮಂದಿ ಬೀಡಿ ಕಟ್ಟುತ್ತಿದ್ದರು. ವಿದ್ಯಾ ವಂತ ಯುವಕರು ಉದ್ಯೋಗ ಅರಸಿ ಮುಂಬೈ, ದುಬೈಗೆ ತೆರಳಿ ನೆಲೆ ಕಂಡು ಕೊಂಡರು. ಇಂದು ಮುಂಬೈಯಲ್ಲಿ ಅವಿಭಜಿತ ದ.ಕ. ಜಿಲ್ಲೆಯವರ ಶೇ.87 ರಷ್ಟು ಹೊಟೇಲ್ಗಳಿವೆ. ಹಾಗಾಗಿ ಸಾಕಷ್ಟು ಯುವಕರಿಗೆ ಉದ್ಯೋಗ ದೊರೆ ಯಿತು. ಇದರಿಂದ ಕರಾವಳಿ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆಗಳು ನಡೆಯುತ್ತಿಲ್ಲ ಎಂದು ಅವರು ಹೇಳಿದರು.
ಮುಖಾಮುಖಿ ಕಾರ್ಯಕ್ರಮವನ್ನು ಹಿರಿಯ ವಿಮರ್ಶಕ ಪ್ರೊ.ಮುರಳಿಧರ ಉಪಾಧ್ಯ ಹಾಗೂ ಹಿರಿಯ ವಿದ್ವಾಂಸ ಡಾ.ರಾಘವ ನಂಬಿಯಾರ್ ನಡೆಸಿ ಕೊಟ್ಟರು. ನಿವೃತ್ತ ಪ್ರಾಚಾರ್ಯ ಡಾ.ಪಾದೆಕಲ್ಲು ವಿಷ್ಣು ಭಟ್ ಆಳ್ವರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದೈವಾರಾಧನೆಯ ವಿಂಡಬನೆ ಸಲ್ಲದು
ಇಂದು ದೈವಾರಾಧನೆ ವಿಂಡಬನೆ ಆಗುತ್ತಿದೆ. ಆರಾಧನೆ ಬದಲು ವಿನೋದ ಆಗುತ್ತಿದೆ. ಈ ನಿಟ್ಟಿನಲ್ಲಿ ದೈವಾರಾಧನೆಗೆ ಸಂಬಂಧಿಸಿದ ಎಲ್ಲರನ್ನು ಒಗ್ಗೂಡಿಸಿ ನಿಯಮ ಬಗ್ಗೆ ಪುಸ್ತಕ ರಚಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಕುಂದಾಪುರ ದಿಂದ ಕಾಸರಗೋಡುವರೆಗೆ ಓಡಾಟ ನಡೆಸುತ್ತಿದ್ದೇನೆ. ದೈವಾರಾಧನೆಗೆ ಎಲ್ಲ ರನ್ನು ಒಗ್ಗೂಡಿಸುವ ಶಕ್ತಿ ಇದೆ. ಈ ಆರಾಧನೆಯನ್ನು ವಿಡಂಬನಾತ್ಮಕವಾಗಿ ನಾಟಕ ರೀತಿಯಲ್ಲಿ ತೋರಿಸುವುದು ದೊಡ್ಡ ದುರಂತ ಎಂದು ಏರ್ಯ ಲಕ್ಷ್ಮೀ ನಾರಾಯಣ ಆಳ್ವ ತಿಳಿಸಿದರು.