ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರಕಾರದಿಂದ ಯತ್ನ: ಎಸ್ಡಿಪಿಐ
ಮಂಗಳೂರು, ಜ.18: ರಾಜ್ಯದ ಮೈತ್ರಿ ಸರಕಾರವು ಪ್ರತಿಭಟನೆ, ಹೋರಾಟಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯ ಮೂಲಕ ಶುಲ್ಕ ಕಡ್ಡಾಯಗೊಳಿಸುವಂತೆ ಹೊಸ ನಿಯಮವನ್ನು ಜಾರಿಗೆ ತರಲು ಸುತ್ತೋಲೆಯನ್ನು ಹೊರಡಿಸಿರುವುದು ಪ್ರಜಾಪ್ರಭುತ್ವ ದೇಶದಲ್ಲಿ ಜನತೆಗೆ ಸಂವಿಧಾನ ಕೊಟ್ಟಂತಹ ಹಕ್ಕನ್ನು ದಮನಿಸುವ ಭಾಗವಾಗಿದೆ ಎಂದು ಎಸ್ಡಿಪಿಐ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಯಾವುದೇ ಹೋರಾಟಗಳು, ಪ್ರತಿಭಟನೆ, ಧರಣಿ, ಸಾರ್ವಜನಿಕ ಸಭೆ, ರ್ಯಾಲಿ ಮತ್ತಿತರ ಯಾವುದೇ ಕಾರ್ಯಕ್ರಮಗಳು ನಡೆಸಬೇಕಾದರೆ ಶುಲ್ಕ ಪಾವತಿಯ ಹಲವು ಹೊಸ ಷರತ್ತುಗಳನ್ನು ಪಾಲಿಸಬೇಕೆಂದು ಪೊಲೀಸ್ ಇಲಾಖೆಯ ಮೂಲಕ ಪ್ರಜಾಪ್ರಭುತ್ವ ಕೊಟ್ಟ ಹಕ್ಕನ್ನು ಕಸಿಯಲು ರಾಜ್ಯ ಸರಕಾರ ಪ್ರಯತ್ನಿಸುತ್ತಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ನಿಯಮಗಳು ರಾಜ್ಯದಲ್ಲಿ ನಡೆಯತ್ತಿರುವ ಜನವಿರೋಧಿ ನೀತಿ, ಅಕ್ರಮ, ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧವಾಗಿ ಯಾರು ಕೂಡ ಮಾತನಾಡದೇ ಮೌನಕ್ಕೆ ಶರಣಾಗುವಂತಿದೆ. ಆದುದರಿಂದ ಇದನ್ನು ಒಪ್ಪಲು ‘ಹೋರಾಟ- ರಾಜಕೀಯ’ ನಡೆಸುತ್ತಿರುವ ಎಸ್ಡಿಪಿಐ ಪಕ್ಷಕ್ಕೆ ಖಂಡಿತ ಸಾಧ್ಯವಿಲ್ಲ. ಈ ನಿಯಮವನ್ನು ಜಾರಿಗೆ ತಂದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದೆಂದು ಎಸ್ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.