ಕುಂದಾಪುರ: ಚಿರತೆ ಚರ್ಮ ಮಾರಾಟ ಯತ್ನ; 10 ಮಂದಿ ಬಂಧನ
ಕುಂದಾಪುರ, ಜ.18: ಚಿರತೆ ಚರ್ಮ ಮಾರಾಟ ಜಾಲವನ್ನು ಬೇಧಿಸುವಲ್ಲಿ ಕುಂದಾಪುರದ ವಲಯ ಅರಣ್ಯಾಧಿಕಾರಿ ಹಾಗೂ ಬೆಂಗಳೂರು ಅರಣ್ಯ ಸಿಐಡಿ ನೇತೃತ್ವದ ತಂಡ ಯಶಸ್ವಿಯಾಗಿದ್ದು, ಈ ಸಂಬಂಧ ಶುಕ್ರವಾರ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ 10 ಮಂದಿಯನ್ನು ಬಂಧಿಸಿದೆ.
ಬಂಧಿತರನ್ನು ಕಾರವಾರದ ಸೂರಜ್ (34), ಭಟ್ಕಳದ ರಾಘು (30), ಪ್ರವೀಣ್ ರಾಮ ದೇವಾಡಿಗ, ನಾಗರಾಜ (25), ಮೋಹನ್ ಜಿ.ನಾಯ್ಕ (24), ಸಂಜೀವ ಪೂಜಾರಿ, ಸುಬ್ರಹ್ಮಣ್ಯ (34), ಹೊನ್ನಾವರದ ಜಾನ್ಸನ್ (32), ತಗ್ಗರ್ಸೆಯ ವೀರೇಂದ್ರ ಶೆಟ್ಟಿ (35), ಬೈಂದೂರಿನ ನಾಗರಾಜ (28) ಎಂದು ಗುರುತಿಸಲಾಗಿದೆ.
ಆರೋಪಿಗಳು ಈ ಚಿರತೆ ಚರ್ಮವನ್ನು ಭಟ್ಕಳ ಹಾಗೂ ಬೈಂದೂರು ಪ್ರದೇಶದಿಂದ ತಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ವ್ಯಾಪಾರ ನಡೆಸುತ್ತಿ ದ್ದರೆನ್ನಲಾಗಿದೆ. ಈ ವೇಳೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ನೇತೃತ್ವದ ತಂಡ ಚಿರತೆ ಚರ್ಮ, ಎರಡು ಕಾರುಗಳು, 11 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದೆ.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾರ್ಗದರ್ಶನದಲ್ಲಿ ಬೆಂಗಳೂರಿನ ಅರಣ್ಯ ಸಿಐಡಿ ನಿರೀಕ್ಷಕ ರವಿ ಕುಮಾರ್ ಹಾಗೂ ಸಿಬ್ಬಂದಿ, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಹಾಗೂ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್ ಈ ಬಗ್ಗೆ ತನಿಖೆಗೆ ನಡೆಸುತ್ತಿದ್ದಾರೆ.