ಲೋಕೇಶ್ ಮುಚ್ಚೂರ್ಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ
ಮಂಗಳೂರು, ಜ.21: ಕಟೀಲು ಮೇಳದ ಕಲಾವಿದ, ಪ್ರಸಿದ್ಧ ಪುಂಡು ವೇಷಧಾರಿ ಲೋಕೇಶ್ ಮುಚ್ಚೂರು ಅವರಿಗೆ ಈ ಬಾರಿಯ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಲಭಿಸಿದೆ.
ಕಾರ್ಕಳ ಹಿರ್ಗಾನ ಶ್ರಿ ಕುಂದೇಶ್ವರ ದೇವಸ್ಥಾನ ಜಾತ್ರೆಯ ಸಂದರ್ಭ ಜ.23ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಅದರೊಂದಿಗೆ ಹಿರಿಯ ಅರ್ಥಧಾರಿ ನಡಿಬೆಟ್ಟು ಧರ್ಮರಾಜ ಕಟ್ಟಡರಿಗೆ ಗೌರವ ಸನ್ಮಾನ ಮಾಡಲಾಗುವುದು. ಮೇರು ಭಾಗವತ ಬಲಿಪ ನಾರಾಯಣ ಭಾಗವತರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
ಒಂದೇ ದೇಶ- ಒಂದೇ ಶಿಕ್ಷಣ ರಾಷ್ಟ್ರೀಯ ಅಭಿಯಾನದ ರೂವಾರಿ ಪ್ರಕಾಶ್ ಅಂಚನ್ ದಡ್ಡಲಕಾಡು ಅಧ್ಯಕ್ಷತೆ ವಹಿಸುವರು. ಶಾಸಕ ಸುನಿಲ್ ಕುಮಾರ್, ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಯಕ್ಷಗಾನ, ವೀರ ಅಭಿಮನ್ಯು ಮತ್ತು ಕದ್ರಿ ಬಾಲ ಯಕ್ಷಕೂಟದಿಂದ ಶ್ರೀಕೃಷ್ಣಲೀಲೆ ಯಕ್ಷಗಾನ ನಡೆಯಲಿದೆ. ಕಿಶೋರ್ ಡಿ. ಶೆಟ್ಟಿ ಯಜಮಾನಿಕೆಯ ಲಕುಮಿ ತಂಡದ ಕಲಾವಿದರಿಂದ ಅರವಿಂದ ಬೋಳಾರ್ ಪ್ರಧಾನ ಪಾತ್ರದಲ್ಲಿ ಹಾಸ್ಯಮಯ ತುಳು ನಾಟಕ ‘ಮಂಗೆ ಮಲ್ಪೊಡ್ಚಿ’ ಪ್ರದರ್ಶನಗೊಳ್ಳಲಿದೆ.