ಬಸ್ರೂರು ಮನೆ ತಲುಪಿದ ಕುವೈತ್ ನಲ್ಲಿ ಬಂಧಿಯಾಗಿದ್ದ ಶಂಕರ ಪೂಜಾರಿ
ಕುಂದಾಪುರ, ಜ.21: ಏಳು ತಿಂಗಳುಗಳ ಕಾಲ ಕುವೈತ್ ಜೈಲಿನಲ್ಲಿದ್ದು, ಇದೀಗ ಬಿಡುಗಡೆ ಹೊಂದಿ ಭಾರತಕ್ಕೆ ಮರಳಿರುವ ಕುಂದಾಪುರದ ಬಸ್ರೂರು ನಿವಾಸಿ ಶಂಕರ ಪೂಜಾರಿ (40) ಇಂದು ಬೆಳಗ್ಗೆ ಕುಂದಾಪುರಕ್ಕೆ ಆಗಮಿಸಿ ತನ್ನ ಮನೆಮಂದಿಯನ್ನು ಸೇರಿಕೊಂಡಿದ್ದಾರೆ.
ಮುಂಬೈಯಿಂದ ಬಸ್ ಮೂಲಕ ಕುಂದಾಪುರಕ್ಕೆ ಆಗಮಿಸಿದ ಶಂಕರ ಪೂಜಾರಿ, ಇತ್ತೀಚೆಗೆ ನಡೆದ ಅಪಘಾತದಿಂದ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ಪತ್ನಿ ಜ್ಯೋತಿ ಹಾಗೂ ಮಗುವನ್ನು ಭೇಟಿ ಮಾಡಿದ್ದಾರೆ. ಬಳಿಕ ಬಸ್ರೂರಿನ ಮನೆಗೆ ತೆರಳಿರುವ ಅವರು ವಿಶ್ರಾಂತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
‘ನನ್ನ ಪತಿ ಇಂದು ಬೆಳಗ್ಗೆ ಮುಂಬೈಯಿಂದ ಕುಂದಾಪುರ ತಲುಪಿದ್ದು, ಇದೀಗ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಮಾನಸಿಕವಾಗಿ ನೊಂದಿರುವ ಅವರು ಈಗ ವಿಶ್ರಾಂತಿಯಲ್ಲಿದ್ದಾರೆ. ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಿದ್ದಾರೆ’ ಎಂದು ಜ್ಯೋತಿ ಪತ್ರಿಕೆಗೆ ತಿಳಿಸಿದ್ದಾರೆ.
ಸಹೋದ್ಯೋಗಿಯ ಪರಿಚಯದ ವ್ಯಕ್ತಿಯೊಬ್ಬರ ನಿಷೇಧಿತ ಔಷಧಿ ಪಾರ್ಸೆಲ್ ಕೊಂಡೊಯ್ದ ಆರೋಪದಲ್ಲಿ ಕುವೈತ್ ವಿಮಾನ ನಿಲ್ದಾಣದಲ್ಲಿ ಸೆರೆಯಾಗಿ ಕಳೆದ ಏಳು ತಿಂಗಳಿನಿಂದ ಜೈಲಿನಲ್ಲಿದ್ದ ಶಂಕರ ಪೂಜಾರಿ ವಿವಿಧ ಸಂಘಟನೆಗಳ ಪ್ರಯತ್ನದಿಂದ ಜ.15ರಂದು ಕುವೈತ್ ನ್ಯಾಯಾಲಯದ ಮೂಲಕ ಬಿಡುಗಡೆ ಹೊಂದಿದ್ದರು. ಇದರಿಂದಾಗಿ ಅವರು ಕುವೈತ್ ನಲ್ಲಿ ತನ್ನ ಉದ್ಯೋಗವನ್ನು ಕೂಡ ಕಳೆದುಕೊಂಡಿದ್ದಾರೆ.