ವಿಕಲಚೇತನರ ಬಸ್ ಪಾಸುಗಳ ನವೀಕರಣಕ್ಕೆ ಸೂಚನೆ
ಉಡುಪಿ, ಜ. 22: ಕ.ರಾ.ರ.ಸಾ.ಸಂಸ್ಥೆಯು ವಿಕಲಚೇತನ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸುತಿದ್ದು, 2018ನೇ ಸಾಲಿನಲ್ಲಿ ವಿತರಿಸಿದ ರಿಯಾಯಿತಿ ಬಸ್ ಪಾಸುಗಳ ಅವಧಿ ಕಳೆದ ಡಿ. 31ಕ್ಕೆ ಮುಕ್ತಾಯಗೊಂಡಿದೆ.
2019ನೇ ಸಾಲಿಗಾಗಿ ಈ ಬಸ್ಸು ಪಾಸುಗಳನ್ನು ನವೀಕರಿಸಲು ಕ್ರಮ ಕೈಗೊಂಡು ಹೊಸ ಪಾಸುಗಳನ್ನು ನೀಡಲಾಗುವುದು. ವಿಕಲಚೇತನರ ರಿಯಾ ಯಿತಿ ಬಸ್ ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಫೆ.28ವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.
2018ನೇ ಸಾಲಿನಲ್ಲಿ ವಿತರಿಸಿರುವ ವಿಕಲಚೇತನರ ಬಸ್ಪಾಸುಗಳನ್ನು ನವೀಕರಿಸಲು ಆಯಾ ತಾಲೂಕುಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಜ.23ರಂದು ಉಡುಪಿ ಘಟಕ (ನಿಟ್ಟೂರು), ಜ.24ರಂದು ಕುಂದಾಪುರ ಘಟಕದಲ್ಲಿ ನವೀಕರಣ ಮಾಡಿಸಿಕೊಳ್ಳಬಹುದು. ಇದಕ್ಕೆ ಬರಲು ಅನಾನೂಕೂಲವಾದಲ್ಲಿ ಮಂಗಳೂರಿನ ವಿಭಾಗೀಯ ಕಚೇರಿಯಲಿ್ಲ ಪಾಸು ನವೀಕರಿಸಿಕೊಳ್ಳಬಹುದು.
ನವೀಕರಣಕ್ಕೆ ಹಳೆಯ ಪಾಸನ್ನು ಕಡ್ಡಾಯವಾಗಿ ಹಿಂದಿರುಗಿಸಬೇಕು. 660 ರೂ. ನಗದು ಹಣದೊಂದಿಗೆ 3 ಪಾಸ್ಪೋರ್ಟ್ ಸೈಜಿನ ಫೋಟೋಗಳು, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೀಡಿದ ಗುರುತಿನ ಚೀಟಿಯ ಮೂಲ ಪ್ರತಿ, ವಿಳಾಸದ ದೃಢೀಕರಣಕ್ಕೆ ಆಧಾರ್ ಕಾರ್ಡ್ನ್ನು ತರಬೇಕು. ನವೀಕರಣಕ್ಕೆ ಫೆ. 28ರವರೆಗೆ ಅವಕಾಶವಿದೆ ಎಂದು ಕರಾರಸಾಸಂ ಮಂಗಳೂರಿನ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.