ತಾಜ್ಯವನ್ನು ಸಂಗ್ರಹಣೆ ಮಾಡುವ ಮೂಲಕ ದೇಶದ ಗಮನ ಸೆಳೆಯುವ ಕೆಲಸ ನಡೆದಿದೆ: ಶೀನ ಶೆಟ್ಟಿ
ಉಳ್ಳಾಲ, ಜ. 23: ನಾವು ಕೆಲಸಕ್ಕೆ ಜಾಸ್ತಿ ಒತ್ತುಕೊಡಬೇಕಾಗಿದೆಯೇ ಹೊರತು ಮಾತಿಗಲ್ಲ. ಆ ಕೆಲಸ ಉಳ್ಳಾಲ ಹಳೆಕೋಟೆ ಶಾಲೆಯಲ್ಲಿ ಆಗಿದೆ. ತಾಜ್ಯವನ್ನು ಸಂಗ್ರಹಣೆ ಮಾಡುವ ಮೂಲಕ ದೇಶದ ಗಮನ ಸೆಳೆಯುವಂತಹ ಕೆಲಸ ನಡೆದಿದೆ. ಯಾರೂ ಮಾಡದ ಕೆಲಸ ಹಳೆಕೋಟೆಯಲ್ಲಿ ವಿದ್ಯಾರ್ಥಿ ಗಳಿಂದ ಆಗಿದೆ. ಇಂತಹ ಕೆಲಸ ಎಲ್ಲೂ ಆಗಿಲ್ಲ. ಈ ಕೆಲಸ ದೇಶದ ಗಮನ ಸೆಳೆಯುತ್ತದೆ. ಇದರ ಎದುರು ನಮಗೆ ಮಾತನಾಡುವಂತಹ ಶಕ್ತಿ ಇಲ್ಲ. ರಾಜ್ಯಕ್ಕೆ ಗೌರವ ತರುವಂತಹ ಕೆಲಸ ಇದಾಗಿದೆ. ಇದನ್ನು ನಾವು ಸದಾ ಗೌರವಿಸುತ್ತೇವೆ ಎಂದು ದ.ಕ. ಜಿಲ್ಲಾ ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ ಹೇಳಿದರು.
ಅವರು ಹಳೆಕೋಟೆ ಶಾಲೆಯಲ್ಲಿ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ಜಿಲ್ಲಾಧಿಕಾರಿಯವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತ್ವಾಹಾ ಮಾತನಾಡಿ, ಪ್ರಸಕ್ತ ತ್ಯಾಜ್ಯ ಸಂಪೂರ್ಣ ನಿವಾರಣೆ ಮತ್ತು ಸ್ವಚ್ಛತೆ ಕಾಪಾಡುವ ಕೆಲಸ ಉಳ್ಳಾಲದಲ್ಲಿ ಆಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ತ್ಯಾಜ್ಯ ಸಂಗ್ರಹ ಮಾಡಿ ಸ್ವಚ್ಛತೆ ಕಾಪಾಡಿರುವುದನ್ನು ನೋಡಿ ಸಂತಸವಾಗಿದೆ. ಪರಿಸರವನ್ನು ಸುಂದರವಾಗಿಡುವುದರಲ್ಲಿ ವಿದ್ಯಾರ್ಥಿಗಳ ಕಾಳಜಿ ಬಹಳಷ್ಟಿದೆ. ಇದೇ ರೀತಿಯ ಸ್ವಚ್ಛತೆ ಮುಂದುವರಿಯಬೇಕು , ಉಳ್ಳಾಲ ಸ್ಚಚ್ಛವಾಗಿರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಮಾತನಾಡಿ ವಿದ್ಯಾರ್ಥಿಗಳು ಮಾಡಿದ ಸ್ವಚ್ಚತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಉಳ್ಳಾಲ ನಗರ ಪೌರಾಯುಕ್ತೆ ವಾಣಿ ವೀ ಆಳ್ವ, ಕೇಂದ್ರ ಜುಮಾ ಮಸೀದಿ ನಗರ ಸಭಾ ಸದಸ್ಯ ರವೂಫ್, ಮೊಹಮ್ಮದ್, ಇಬ್ರಾಹಿಂ, ಶಾಲಾಭಿವೃದ್ಧಿ ಸಮಿತಿಯ ಅಲ್ತಾಫ್, ಕೋಶಾಧಿಕಾರಿ ಕರೀಂ, ಸಮಿತಿ ಸದಸ್ಯ ರಹೀಂ ಉಪಸ್ಥಿತರಿದ್ದರು. ಕೆಎಂಕೆ ಮಂಜನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.