ಬಜ್ಪೆ: ಪತ್ನಿಯ ಕೊಲೆಗೆ ಯತ್ನಿಸಿ ತಾನೂ ಆತ್ಮಹತ್ಯೆಗೆತ್ನಿಸಿದ ಪತಿ
ಮಂಗಳೂರು, ಜ.23: ದಂಪತಿಯ ಮಧ್ಯೆ ಇದ್ದ ವೈಮನಸ್ಸಿನಿಂದ ಪತಿಯು ಪತ್ನಿಯನ್ನು ಕೊಲೆ ಮಾಡಲು ವಿಫಲಯತ್ನ ನಡೆಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಜ್ಪೆ ಸಮೀಪದ ಕರಂಬಾರಿನಲ್ಲಿನ ಪ್ಲಾಟ್ವೊಂದರಲ್ಲಿ ನಡೆದಿದೆ.
ಕರಂಬಾರಿನ ದಂಪತಿ ಸಂಜಯ್ ಶೆಟ್ಟಿ(45) ಮತ್ತು ಶುಭವಾಣಿ(36) ಎಂಬವರೇ ಕೊಲೆಯತ್ನ ಹಾಗೂ ಆತ್ಮಹತ್ಯೆಗೆತ್ನಿಸಿದವರು. ಸದ್ಯ ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಭವಾಣಿಗೆ ಈ ಹಿಂದೆ ಸುಕೇಶ್ ಎಂಬವರೊಂದಿಗೆ ವಿವಾಹವಾಗಿದ್ದು ಆತ ತೀರಿಕೊಂಡಿದ್ದ. ಇನ್ನು ಸಂಜಯ್ ಕೂಡ ವಿವಾಹವಾಗಿದ್ದು ಅವರ ಪತ್ನಿಯೂ ತೀರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶುಭವಾಣಿ ಮತ್ತು ಸಂಜಯ್ ಪರಿಚಯ ಮಾಡಿಕೊಂಡು ಏಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಬ್ಬರೂ ಬಡ್ಡಿ ಹಾಗೂ ಚೀಟಿ ವ್ಯವಹಾರ ನಡೆಸುತ್ತಿದ್ದರು. ಇದರಿಂದ ಬಂದ ಹಣದಲ್ಲಿ 2018ರ ನವೆಂಬರ್ನಲ್ಲಿ ಕೆಂಜಾರು ಸಮೀಪ ಫ್ಲಾಟ್ ಖರೀದಿ ಮಾಡಿದ್ದರು. ಖರೀದಿಯಲ್ಲಿ ಪತ್ನಿಯದ್ದೇ ಹೆಚ್ಚಿನ ಹಣವನ್ನು ಹೂಡಲಾಗಿತ್ತು. ಮಾಲಕತ್ವದ ವಿಚಾರದಲ್ಲಿ ಇವರಿಬ್ಬರ ಮಧ್ಯೆ ವೈಮನಸ್ಸು ಆರಂಭವಾಗಿತ್ತು. ಈ ಬಗ್ಗೆ ಪದೇಪದೇ ಜಗಳವಾಗುತ್ತಿತ್ತು. ಇದೇ ಬೇಸರದಿಂದ ಶುಭವಾಣಿ ತನ್ನ 14 ವರ್ಷದ ಮಗಳ ಜತೆ ಮನೆಬಿಟ್ಟು ತಾಯಿ ಮನೆಗೆ ಹೋಗಿದ್ದರು.
ಶುಭವಾಣಿ ಮಂಗಳವಾರ ಮಧ್ಯಾಹ್ನ ಕಟೀಲು ದೇವಳಕ್ಕೆ ಹೋಗಿ ಬಂದು ಸಂಜೆ ವೇಳೆ ಮಗಳ ಜತೆ ಪ್ಲಾಟ್ಗೆ ಹೋಗಿದ್ದರು. ಆ ಸಮಯದಲ್ಲಿ ಸಂದೇಶ್ ಶೆಟ್ಟಿಯೊಂದಿಗೆ ಗಲಾಟೆ ನಡೆದಿತ್ತು. ಇದೇ ವೇಳೆ ಮಾತಿಗೆ ಮಾತು ಬೆಳೆದು ಸಂದೇಶ್ ಶೆಟ್ಟಿ ಶುಭವಾಣಿಯನ್ನು ಕತ್ತಿಯಿಂದ ಕುತ್ತಿಗೆಗೆ, ಬೆನ್ನಿಗೆ, ಎದೆಗೆ, ತಲೆಗೆ, ಕೈಗೆ ಕಡಿದು ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಶುಭವಾಣಿ ಮತ್ತು ಮಗಳು ಬೊಬ್ಬೆ ಹಾಕಿ ಕೆಳಗೆ ಓಡಿ ಬಂದಿದ್ದಾರೆ. ಇದಾದ ಬೆನ್ನಲ್ಲೇ ಸಂಜಯ್ ಕೂಡ ಫಿನಾಯಿಲ್/ಸೀಮೆಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಗಂಭೀರ ಗಾಯಗೊಂಡ ಶುಭವಾಣಿ ಅವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂದೇಶ್ ಶೆಟ್ಟಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಆರೋಪಿ ಸಂಜಯ್ ವಿರುದ್ಧ ಕೊಲೆಯತ್ನ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.