ಜನರೊಂದಿಗೆ ಬೆರೆಯುವ ತುಳು ಭಾಷಿಕರು : ಎ.ಸಿ.ಭಂಡಾರಿ
ಮೂಡಿಗೆರೆ, ಫೆ. 1: ತುಳು ಭಾಷಿಕರು ಎಲ್ಲಿ ನೆಲೆಸಿದ್ದರೂ ಜನರೊಂದಿಗೆ ಬೆರೆತು ಬಾಳುತ್ತಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಭಿಪ್ರಾಯಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟ ಸಹಯೋಗದಲ್ಲಿ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶುಕ್ರವಾರ ನಡೆದ ತುಳು ಸಾಹಿತ್ಯ ಸಮ್ಮೇಳನ ದಶಮಾನೋತ್ಸವ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳು ಭಾಷೆ ಯಾವುದೇ ಧರ್ಮ ಜಾತಿಗೆ ಸೀಮಿತವಾಗಿಲ್ಲ. ದಕ್ಷಿಣ ಕನ್ನಡ ಭಾಗದಲ್ಲಿ ಬ್ಯಾರಿ, ಕನ್ನಡ, ಕೊಂಕಣಿ, ಕನ್ನಡ ಭಾಷೆಯಿದ್ದರೂ ಇಲ್ಲಿ ಭಾಷೆಯ ಬಗ್ಗೆ ಯಾವುದೇ ಗೊಂದಲ ಉಂಟಾಗಿಲ್ಲ. ಭಾಷೆಯಲ್ಲಿ ಪ್ರೀತಿ, ಮಮಕಾರ ಇದೆ. ತುಳುಭಾಷೆಗೆ ಮಾನ್ಯತೆ ಸಿಗಬೇಕಾಗಿದೆ. ತುಳು ಸಾಹಿತ್ಯ, ಕೃತಿಗಳು ಸೃಷ್ಟಿಯಾಗಬೇಕು. ಅಕಾಡೆಮಿ ಮೂಲಕ ಪ್ರಕಟವಾಗಬೇಕು. ಭಾಷೆಯನ್ನು ಬೇರೆ ಭಾಷೆಗೆ ಅನುವಾದ ಮಾಡಿದರೆ ಭಾಷೆಯ ಮೌಲ್ಯ ಹೆಚ್ಚಾಗುತ್ತದೆ ಎಂದರು.
ತಾಪಂ ಅಧ್ಯಕ್ಷ ಕೆ.ಸಿ.ರತನ್ ಕುಮಾರ್, ಪ್ರತೀ ವರ್ಷವೂ ಜಾತ್ರೆ, ಹಬ್ಬದ ರೀತಿಯಲ್ಲಿ ಸಡಗರದಿಂದ ತುಳು ವೈಭವೋ ಆಚರಿಸಲಾಗುತ್ತಿದೆ. ಯಕ್ಷಗಾನ, ಕೋಲ ಇತ್ಯಾದಿ ಕಾರ್ಯಕ್ರಮಗಳು ಕರಾವಳಿ ಭಾಗದ ಕೊಡುಗೆಯಾಗಿದೆ. ದ.ಕ.ಜಿಲ್ಲೆ ವಿದ್ಯಾವಂತರ ಕ್ಷೇತ್ರವಾಗಿದೆ. ತುಳು ಭಾಷೆ ಇನ್ನಷ್ಟು ವಿಸ್ತರಿಸಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಂಡೆ, ಕೊಂಬು ವಾದ್ಯದೊಂದಿಗೆ ವಿವಿಧ ಕಲಾಪ್ರಕಾರಗಳ ಸ್ತಬ್ದ ಚಿತ್ರಗಳು, ವಿವಿಧ ವೇಷ ಭೂಷಣಗಳ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಯಿತು. ವಿವಿಧ ಕ್ಷೇತ್ರದ ಸಾಧಕರಾದ ಎಂ.ಎ.ಶೇಷಗಿರಿ, ಎಂ.ಆರ್.ಜಗದೀಶ್, ಎ.ಸಿ.ಅಯೂಬ್, ಎಂ.ಜೆ.ದಿನೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತುಳುಕೂಟದ ಅಧ್ಯಕ್ಷ ಅಶೋಕ್ ಎನ್.ಶೆಟ್ಟಿ, ಮಾಜಿ ಸಚಿವೆ ಮೋಟಮ್ಮ, ಪಪಂ ಅಧ್ಯಕ್ಷೆ ರಮೀಜಾಬಿ, ಜಿಪಂ ಸದಸ್ಯರಾದ ಅಮಿತಾ ಮುತ್ತಪ್ಪ, ಸುಧಾ ಯೋಗೀಶ್, ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಶಶಿಧರ್ ನಿಟ್ಟೆ, ಸಂತ ಅತೋನಿ ಚರ್ಚ್ ಪೌಲ್ ಮಚಾದೋ, ರಾಮಚರಣ ಅಡ್ಯಂತಾಯ, ವಸಂತ್ ಎಸ್.ಪೂಜಾರಿ, ರವಿಕುಮಾರ್, ರಾಘವ ಮುಡಿತ್ತಾಯ, ನರೇಂದ್ರ ಶೆಟ್ಟಿ, ಸುಂದರ ಬಿಳಗುಳ, ವಿಶ್ವಕುಮಾರ್, ವಿನೋದ್ಕುಮಾರ್ ಶೆಟ್ಟಿ, ಅಬ್ಬಾಸ್ ಕಿರುಗುಂದ ಮತ್ತಿತರರು ಇದ್ದರು.