ಫೆ.10ರಿಂದ ನಾಮಧಾರಿ ಸಮಾಜ ಗುರುಮಠದಲ್ಲಿ ಪುನರ್ ಪ್ರತಿಷ್ಠಾನ ವರ್ಧಂತಿ ಉತ್ಸವ
ಭಟ್ಕಳ, ಫೆ. 7: ನಾಮಧಾರಿ ಸಮಾಜದ ಗುರುಮಠವಾದ ಆಸರಕೇರಿ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟ್ರಮಣ ದೇವಸ್ಥಾನದಲ್ಲಿ ಫೆ. 10ರಿಂದ 12ರ ವರೆಗೆ ಶ್ರೀ ದೇವರ ಪುನರ್ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಪಾಲಕಿ ಮಹೋತ್ಸವ ನಡೆಯಲಿದೆ ಎಂದು ನಾಮಧಾರಿ ಸಮಾಜದ ಗುರುಮಠದ ಅಧ್ಯಕ್ಷ ಎಂ. ಆರ್. ನಾಯ್ಕ ಹೇಳಿದರು.
ಅವರು ಇಲ್ಲಿನ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ವರ್ಧಂತ್ಯುತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಫೆ.9 ರಂದು ರಾತ್ರಿ ವಾಸ್ತು ರಾಕ್ಷೋಘ್ನ ಹೋಮ, ಫೆ.10 ರಂದು ಬೆಳಿಗ್ಗೆ ಕಲಾವೃದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ಫೆ.11 ರಂದು ಬೆಳಿಗ್ಗೆ 9.30 ಗಂಟೆಗೆ ವೇ.ಮೂ. ಲಕ್ಷ್ಮೀಪತಿ ಗೋಪಾಲ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಮುರಳೀಧರ ಆರ್ ಅಯ್ಯಂಗಾರ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ಮಧ್ಯಾಹ್ನ ಮಹಾಪೂಜೆ, ಮಹಾಅನ್ನಸಂತರ್ಪಣೆ, ಸಂಜೆ ಹರಿಸೇವಾ ಕುಣಿತ, ರಾತ್ರಿ 8 ಗಂಟೆಗೆ ಶ್ರೀ ಪದ್ಮಾವತಿ ಅಮ್ಮನವರ ಪಾಲಕಿ ಆಗಮನ ಹಾಗೂ ರಾತ್ರಿ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ. 12 ರಂದು ಪಾಲಕಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಪುರುಷ ಸೂಕ್ತ ಹವನ, ಗಣಹೋಮ, ಶ್ರೀ ದೇವರಿಗೆ ತುಲಾಭಾರ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದರೆ, 10.30 ಗಂಟೆಗೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಆಶೀರ್ವಚನ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಅನ್ನ ಸಂತರ್ಪಣೆ ನಡೆಯಲಿದ್ದು, ಸಂಜೆ 5 ಗಂಟೆಯಿಂದ ಶ್ರೀ ದೇವರ ಪಾಲಕಿ ಮೆರವಣೆ ಜರುಗಲಿದೆ. ರಾತ್ರಿ 12 ಗಂಟೆಗೆ ರಂಗ ಪೂಜೆ, ಮಹಾಮಂಗಳಾರತಿ ಮುಂತಾದವು ನಡೆಯಲಿದೆ. ಫೆ. 13 ರಂದು ಬೆಳಿಗ್ಗೆ 11 ಗಂಟೆಯಿಂದ ಫಲಾವಳಿ ವಸ್ತುಗಳ ವಿಲೇವಾರಿ, ರಾತ್ರಿ 9 ಗಂಟೆಗೆ ಸ್ಥಳೀಯ ಶ್ರೀನಿವಾಸ ಕಲಾಮಿತ್ರ ಮಂಡಳಿ ಇವರಿಂದ ಮನರಂಜನೆ ಕಾರ್ಯಕ್ರಮ ಮತ್ತು ನಾಟಕ ನೆಯಲಿದ್ದು, ಈ ಎಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಶ್ರೀ ದೇವರ ಹಾಗೂ ಗುರುಗಳ ಕೃಪೆಗೆ ಪಾತ್ರರಾಗುವಂತೆಯು ಕೋರಿದರು.
ನಾಮಧಾರಿ ಸಮಾಜದ ಗೌರವಾಧ್ಯಕ್ಷ ಡಿ.ಬಿ.ನಾಯ್ಕ, ಸಾಂಸ್ಕøತಿಕ ಸಮಿತಿಯ ಕೆ. ಆರ್. ನಾಯ್ಕ ಮಾತನಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ರಾಜೇಶ ನಾಯ್ಕ, ಉಪಾಧ್ಯಕ್ಷ ಮೋಹನ ನಾಯ್ಕ, ಪ್ರಚಾರ ಸಮಿತಿಯ ಸತೀಶಕುಮಾರ್ ಮುಂತಾದವರು ಉಪಸ್ಥಿತರಿದ್ದರು.